ಹುಬ್ಬಳ್ಳಿ: ‘ಯಶಸ್ಸಿಗೆ ಕಠಿಣ ಪರಿಶ್ರಮವನ್ನು ಬಿಟ್ಟರೆ, ಯಾವುದೇ ಅಡ್ಡದಾರಿಗಳಿಲ್ಲ. ಗಟ್ಟಿ ನಿರ್ಧಾರಗಳೊಂದಿಗೆ ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ’ ಎಂದು ಸೇಫ್ ಹ್ಯಾಂಡ್ಸ್ ಸಂಸ್ಥಾಪಕಿ ಶ್ರಾವಣಿ ಪವಾರ ಹೇಳಿದರು.
ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಸಹಯೋಗದೊಂದಿಗೆ,ನಗರದ ಐಇಎಂಎಸ್ಬಿ ಸ್ಕೂಲ್ನಲ್ಲಿ ಶುಕ್ರವಾರ ಆಯೋಜಿಸಿದ್ದಉತ್ತರ ಕರ್ನಾಟಕ ವೃತ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಉದ್ಯಮಶೀಲತೆಯ ಅಗತ್ಯತೆ ಕುರಿತು ಮಾತನಾಡಿದ ಡಾ. ಪೂರ್ಣಿಮಾ ಚರಂತಿಮಠ, ‘ವ್ಯಾಪಾರದ ಅಭಿವೃದ್ಧಿಗೆ ಮಾತ್ರವಲ್ಲದೆ, ಉದ್ಯಮದಲ್ಲಿ ಕೆಲಸ ಮಾಡಲು ಸಹಉದ್ಯಮಶೀಲತೆ ಇರಬೇಕು. ಜೊತೆಗೆ, ಕೌಶಲಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.
ದೇಶಪಾಂಡೆ ಫೌಂಡೇಷನ್ನ ರಕ್ಷಿತ್ ಕಲ್ಯಾಣಿ, ‘ಸ್ಟಾರ್ಟ್ಅಪ್ ಸಂಸ್ಕೃತಿಯ ಅವಕಾಶಗಳು’ ಕುರಿತು, ಆನಂದ ಕೊಟಬಾಗಿ, ‘ಎಸ್ಎಂಇ ಅವಕಾಶಗಳು’ ಹಾಗೂ ‘ನಾಗರಿಕ ಸೇವಾ ಪರೀಕ್ಷೆಗಳು’ ಕುರಿತು ಯುಪಿಎಸ್ಸಿ ಪರೀಕ್ಷೆಯಲ್ಲಿ 250ನೇ ರ್ಯಾಂಕ್ ಪಡೆದಿರುವ ಸಾಹಿತಿ ಆಲದಕಟ್ಟಿ ಮಾತನಾಡಿದರು.
ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಸುಮಾರು 200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಐಇಎಂಎಸ್ ನಿರ್ದೇಶಕ ಡಾ. ವೀರಣ್ಣ ಡಿ.ಕೆ ಸ್ವಾಗತಿಸಿದರು. ವಿನಾಯಕ ಉಪರಾಟೆ ವಂದಿಸಿದರು. ಧಾರವಾಡದ ಕೆಜಿಟಿಸಿಎ ವಲಯದ ಅಧ್ಯಕ್ಷ ಡಾ. ಬಸವರಾಜ ತಲ್ಲೂರು, ಪ್ರೊ. ಪ್ರೀತಿ ಬೆಳಗಾಂವಕರ ಇದ್ದರು.