ಹುಬ್ಬಳ್ಳಿ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿ ಗ್ರಾಮದಲ್ಲಿ ಒಂದೊಂದು ಪೊಲೀಸ್ ಚೌಕಿ ಆರಂಭಿಸಿ ತಲಾ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ವೇದಿಕೆ ಆಗ್ರಹಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರವೀಶ್ ಎಂ.ಕೆ., ‘ಇಂದು ಎಷ್ಟೋ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಭಾವಿಗಳ ಕೈವಾಡದಿಂದಾಗಿ ಅವು ಹೊರಗೆ ಬರುತ್ತಿಲ್ಲ. ಯುವತಿಯರಲ್ಲಿ ಧೈರ್ಯ ಮೂಡಿಸಲು ಪೊಲೀಸ್ ಚೌಕಿ ಆರಂಭಿಸಬೇಕು’ ಎಂದರು.
‘ರಾಜ್ಯದಾದ್ಯಂತ ಭ್ರಷ್ಟಾಚಾರ, ವಂಚನೆಯಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸಲು ನಮ್ಮ ಸಂಘಟನೆ ಕಾರ್ಯನಿರತವಾಗಿದೆ’ ಎಂದು ಹೇಳಿದರು.
ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ ಧಾರವಾಡಕರ ಮಾತನಾಡಿ, ‘ಸರ್ಕಾರದಿಂದ ಸಾಲಸೌಲಭ್ಯ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಮಂಜುನಾಥ ಡಬ್ಬಯ್ಯ ಎಂಬಾತನನ್ನು ಬಂಧಿಸುವಲ್ಲಿ ನಮ್ಮ ಸಂಘಟನೆ ನಿರಂತರ ಹೋರಾಟ ನಡೆಸಿತ್ತು. ಇದೀಗ ಹುಬ್ಬಳ್ಳಿ ರುಥ್ ಮೇರಿ ಎಂಬ ಮಹಿಳೆ ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ನಂಬಿಸಿ ₹ 5 ಕೋಟಿ ಲೂಟಿ ಮಾಡಿ ಓಡಿ ಹೋಗಿದ್ದು, ಆಕೆಯನ್ನು ಶೀಘ್ರವೇ ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಯಪ್ರಕಾಶ್, ರಾಜ್ಯ ಕಾರ್ಯಾಧ್ಯಕ್ಷ ಕೆ.ವಿ. ಶಿವಪ್ಪ, ರಾಜ್ಯ ಜಂಟಿ ಕಾರ್ಯದರ್ಶಿ ವೀರಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಜಿ., ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಗುರುಪ್ರಸಾದ್ ಕರೋಸಿ, ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಡಿ. ಕುಲಕರ್ಣಿ ಇದ್ದರು.