ನಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕಾಗಿದೆ. ನಗರೀಕರಣದ ಪರಿಣಾಮದಿಂದ ಮನೆಯ ಮುಂದಿನ ಘಟಾರದ ವಾಸನೆ ಭಯದಿಂದಾಗಿಯೋ, ಅದರಿಂದ ಉತ್ಪತ್ತಿಯಾಗುವ ಸೊಳ್ಳೆಗಳ ಕಾಟಕ್ಕಾಗಿಯೋ, ದೂಳು ಒಳಹೋಗುವ ಅಥವಾ ಪಕ್ಕದ ಮನೆಯವರ ಕಿರಿಕಾಟಕ್ಕೋ ಏನೋ ಕಿಟಕಿ, ಬಾಗಿಲನ್ನು ತೆರೆದಿಡುವಂತಿಲ್ಲ.
ಇನ್ನೊಂದೆಡೆ, ನಮ್ಮ ಸಾಧನೆಗಳ ಪ್ರತೀಕವೋ ಎಂಬಂತೆ ತಂದಿಟ್ಟಿರುವ ಡಬಲ್ ಡೋರ್ ಫ್ರಿಜ್, ಓವನ್, ಬೃಹದಾಕಾರದ ಟಿವಿ, ಕಂಪ್ಯೂಟರ್, ಮೊಬೈಲ್, ಪ್ಲಾಸ್ಟಿಕ್ ವಸ್ತುಗಳ ಲಿಸ್ಟು ಮನೆಯಲ್ಲಿ ಬೆಳೆಯುತ್ತಲೇ ಇವೆ.
ಇವೆಲ್ಲ ನಮ್ಮ ಮನೆಯೊಳಗಿನ ಆಮ್ಲಜನಕ ಸೇವಿಸಿ, ಈ ಟಾಕ್ಸಿಕ್ ಹವೆಯನ್ನು ಮನೆಯೊಳಗೆ ಹರಡುತ್ತಲೇ ಇರುತ್ತವೆ. ಇನ್ನೊಂದೆಡೆ ಮುಂಜಾನೆಯಿಂದ ಮಲಗಿರುವವರೆಗೂ ಟಾಕ್ಸಿನ್ ಹವೆಯದೇ ಹಾವಳಿ. ಹಲ್ಲು ಉಜ್ಜಲು ಕ್ಲೋರಿನ್ಯುಕ್ತ ಪೇಸ್ಟ್, ಸ್ನಾನಕ್ಕೆ ಸಾಬೂನು, ಹ್ಯಾಂಡ್ ವಾಷ್, ಮನೆಯ ಸ್ವಚ್ಛತೆಗೆ ಕೆಮಿಕಲ್ ಮಾಪ್ಪಿಂಗ್, ಸ್ನಾನದ ನಂತರ ಬಾಡಿ ಫ್ರೆಷನರ್, ಪೂಜೆಗೆ ಕೆಮಿಕಲ್ ಬಳಸಿಯೇ ತಯಾರಿಸಿದ ಊದಿನ ಕಡ್ಡಿಗಳು. ಕೊಠಡಿ ಸುವಾಸಿತವಾಗಿರಲು ರೂಮ್ ಫ್ರೆಷನರ್ಸ್, ಮಲಗುವಾಗ ಸೊಳ್ಳೆ ಬತ್ತಿಗಳೋ ಅಥವಾ ರಿಫಿಲ್ಲೆಂಟ್ಗಳೋ... ಇವೆಲ್ಲವೂ ಮನೆಯಲ್ಲಿನ ಆಮ್ಲಜನಕ ಹೀರಿ ಎಲ್ಲ ವಿಷಕಾರಿ ಅಂಶಗಳನ್ನು ನೀಡುವ ಸಾಧನಗಳೇ. ಆದರೂ ಮನೆಯ ಕಿಟಕಿ, ಬಾಗಿಲು ಬಂದ್ ಆಗಿಯೇ ಇರುತ್ತೆ.
ಅಷ್ಟೇ ಏಕೆ, ಉಣ್ಣುವ ದೋಸೆ ತಯಾರಾಗುವುದೂ ಟಾಫ್ಲಿನ್ ತವೆಯ ಮೇಲೆ. ಮಧ್ಯಾಹ್ನದ ಊಟಕ್ಕೆ ಪ್ಲಾಸ್ಟಿಕ್ ಕ್ಯಾರಿಯರ್, ನೀರು ಕೂಡ ಪ್ಲಾಸ್ಟಿಕ್ ಬಾಟಲಿಯಲ್ಲೇ ಒಯ್ಯಬೇಕು. ಇನ್ನೂ ಟೆರ್ರಿಕೋಟ್ ಬಟ್ಟೆ ಧರಿಸಿ, ಸ್ವಲ್ಪ ಸೆಂಟ್ ಹಾಕಿಕೊಂಡು ಹೊರಬೀಳುವವರೆಗೂ ಎಲ್ಲಾ ಅಶುದ್ಧವೇ! ಆಫೀಸ್ನಲ್ಲಿ ಎಸಿಯದ್ದೇ ಕಾರುಬಾರು. ಮನೆಗೆ ಬಂದು ಮಲಗುವಾಗಲೂ ಎಸಿ ಇರಲೇಬೇಕು. ಎಸಿ ಕೂಡ ಮನೆಯಲ್ಲಿನ ಆಮ್ಲಜನಕವನ್ನು ಹೊರ ಹಾಕುತ್ತಲೇ ಇರುತ್ತದೆ.
ನಮ್ಮ ನಗರದ ಜನತೆಗೆ, ಬಾರದ, ಕಂಡೂ ಕಾಣರಿಯದ ಕ್ಯಾನ್ಸರ್ನಂತಹ ರೋಗ ರುಜಿನಗಳಿಗೆ ಮನೆಯೇ ಮೊದಲಾಗಿದೆ. ಇದಕ್ಕೆಲ್ಲ ಪರಿಹಾರ ನಿಸರ್ಗದ ಅರಿವಿನಲ್ಲಿದ್ದರೂ ಅದನ್ನು ನಾವು ಪರಿಗಣಿಸುತ್ತಿಲ್ಲ. ನಿಸರ್ಗದತ್ತವಾದ ಗಿಡ ಮರ ಬಳ್ಳಿಗಳನ್ನು ಮರೆತಿರುವುದರಿಂದ ಶಾಲೆಗಳಿಗಿಂತ ದವಾಖಾನೆಗಳ ಸಂಖ್ಯೆ ಹೆಚ್ಚಾಗಿವೆ.
ಮನೆ ಹಾಗೂ ಕಚೇರಿಯಲ್ಲಿನ ವಾತಾವರಣ ಕಲ್ಮಷದೊಂದಿಗೆ ಮನಸ್ಸೂ ಕಲ್ಮಷವಾದರೆ ನಾವು ವಾಸಿಸುವ ಸ್ಥಳವೇ ರೋಗ ರುಜಿನಗಳ ಹುಟ್ಟು ಹಾಕುವ ಫ್ಯಾಕ್ಟರಿ ಆಗುತ್ತದೆ. ಅದಾಗುವುದು ಬೇಡ. ಈಗಾಗಲೇ ಆಮ್ಲಜನಕ ಕೊರತೆಯಿಂದಲೇ ಸಾಕಷ್ಟು ಸಾವು–ನೋವುಗಳಾಗುತ್ತಿವೆ. ಈ ಬಗ್ಗೆ ಒಮ್ಮೆ ಯೋಚಿಸಿ, ಕಾರ್ಯಗತರಾಗಿ...
–ಪಿ.ವಿ. ಹಿರೇಮಠ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.