ಹುಬ್ಬಳ್ಳಿ: ಮಳೆಯಿಂದಾಗಿ ನಗರದ ಸಿಆರ್ಎಫ್ (ಕೇಂದ್ರ ರಸ್ತೆ ನಿಧಿ) ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮುಂದಾಗಿದೆ.
ಹೊಸ ಕೋರ್ಟ್ ರಸ್ತೆ, ಶಿರೂರು ಪಾರ್ಕ್, ಗೋಕುಲ ರಸ್ತೆ ಸೇರಿದಂತೆ ನಗರದ ಸಿಆರ್ಎಫ್ ರಸ್ತೆಯ ಗುಂಡಿಗಳಿಗೆ ಜಲ್ಲಿಪುಡಿ ಮಿಶ್ರಿತ ವೆಟ್ ಮಿಕ್ಸ್ ಹಾಕಿ ಮುಚ್ಚಲಾಗುತ್ತಿದೆ.
‘ಪಾಲಿಕೆ ವ್ಯಾಪ್ತಿಯ ಕೆಲ ರಸ್ತೆಗಳು ಮಳೆಯಿಂದಾಗಿ ಹದಗೆಟ್ಟಿವೆ. ಸದ್ಯ ಶಾಶ್ವತ ದುರಸ್ತಿ ಕೆಲಸ ಸಾಧ್ಯವಿಲ್ಲದಿರುವುದರಿಂದ, ಗುಂಡಿಗಳಿಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹಾಕಲಾಗುತ್ತಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಕೆ. ಮಠದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕಾರವಾರ ರಸ್ತೆ, ನೀಲಿಜಿನ್ ರಸ್ತೆ ಸೇರಿದಂತೆ ಕೆಲವೆಡೆ ನಡೆಯುತ್ತಿರುವ ಸಿಆರ್ಎಫ್ ರಸ್ತೆ ಕಾಮಗಾರಿಯು ಮಳೆಯಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಿಡುವು ಕೊಟ್ಟರೆ, ಕಾಮಗಾರಿ ಮತ್ತಷ್ಟು ತ್ವರಿತಗೊಳ್ಳಲಿದೆ’ ಎಂದರು.