ಕೊಲೊಂಬೊ: ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿರುವ ಬೆನ್ನಲ್ಲೇ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು, ದೇಶದ ಉತ್ತಮ ಭವಿಷ್ಯಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
‘ಮೇ 8ರವರೆಗೆ ಸಂಸತ್ ಅಧಿವೇಶನ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿರುವುದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಲು ಮತ್ತು ಸರ್ಕಾರದ ಕೆಲಸಗಳನ್ನು ಮುಂದುವರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಸಂಸತ್ನಲ್ಲಿ ಎಲ್ಲ ಪಕ್ಷಗಳ ಬೆಂಬಲ ನಿರೀಕ್ಷಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಸದ್ಯ ಸಂಸತ್ನಲ್ಲಿ ಉಂಟಾಗಿರುವ ಸಂಘರ್ಷ ಕೊನೆಗಾಣಿಸಲು ನಿರ್ಧರಿಸಿದ್ದೇನೆ. ಹೊಸ ಅಧಿವೇಶನದಲ್ಲಿ ಸರ್ಕಾರದ ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಈಗ ಕಾಲ ಕೂಡಿ ಬಂದಿದೆ’ ಎಂದು ತಿಳಿಸಿದ್ದಾರೆ.