ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಆಕಾಶವಾಣಿ: ಓದುವ ಅಭಿರುಚಿಗೆ ‘ಪುಸ್ತಕ ಪ್ರೀತಿ’

ಧಾರವಾಡ ಆಕಾಶವಾಣಿಯಿಂದ ಬೆಳಿಗ್ಗೆ 7.50ರಿಂದ ಕಾರ್ಯಕ್ರಮ ಪ್ರಸಾರ
Last Updated 14 ಫೆಬ್ರುವರಿ 2021, 16:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಹಿತ್ಯ ಹಾಗೂ ಪುಸ್ತಕ ಪ್ರೇಮಿಗಳ ಓದುವ ಅಭಿರುಚಿಗೆ ಹಿರಿ–ಕಿರಿಯ ಸಾಹಿತಿಗಳ ಕೃತಿಗಳನ್ನು ಪರಿಚಯಿಸುವ ವಿಶೇಷ ಸರಣಿ ಕಾರ್ಯಕ್ರಮವನ್ನು ಧಾರವಾಡ ಆಕಾಶವಾಣಿ ಕೇಂದ್ರ ಮೊದಲ ಬಾರಿಗೆ ಪ್ರಸಾರ ಮಾಡುತ್ತಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಧಾರವಾಡ ಆಕಾಶವಾಣಿ ಹಾಗೂ ಹುಬ್ಬಳ್ಳಿ–ಧಾರವಾಡದ ನಗರ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಧಾರವಾಡ ಆಕಾಶವಾಣಿ ಹಾಗೂ ವಿವಿಧ ಭಾರತಿಯಲ್ಲಿ ಪ್ರತಿ ಭಾನುವಾರ ಹಾಗೂ ಗುರುವಾರ ‘ಪುಸ್ತಕ ಪ್ರೀತಿ’ ಬಿತ್ತರವಾಗುತ್ತಿದೆ.

ಜ.14ರಿಂದ ಬೆಳಿಗ್ಗೆ 7.50ರಿಂದ 15 ನಿಮಿಷಗಳ ಕಾಲ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಆಗಸ್ಟ್‌ 8ರ ವರೆಗೆ ನಡೆಯಲಿದೆ. ಓದುವ ಸಂಸ್ಕೃತಿ, ನಾ ಮೆಚ್ಚಿಕೊಂಡ ಪುಸ್ತಕ, ಇತ್ತೀಚೆಗೆ ಬಿಡುಗಡೆಗೊಂಡಿರುವ ಪುಸ್ತಕಗಳ ಕುರಿತು ವಿದ್ವಾಂಸರು, ಲೇಖಕರು, ಹೊಸ ಬರಹಗಾರರು ಮಾಹಿತಿ ನೀಡುತ್ತಾರೆ.

‘ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಲಂಕೇಶ್, ಬಸವರಾಜ ಕಟ್ಟೀಮನಿ, ರಹಮತ್ ತರೀಕೆರೆ, ವೈದೇಹಿ, ಶಶಿ ತರೀಕೆರೆ ಅವರ ‘ಡುಮಿಂಗ’, ಶಾಂತಿ ಕೆ.ಅಪ್ಪಣ್ಣ ಅವರ ‘ಮೂರು ಚಿಲ್ಲರೆ’, ಕಿರೇಸೂರ ಗಿರಿಯಪ್ಪ ಅವರ ‘ಗಜಲ್’ ಶರಣಬಸಪ್ಪ ಗುಡದಿನ್ನಿ ಅವರ ಕತೆ ಸೇರಿದಂತೆ ಅನೇಕ ಕೃತಿಗಳು ಅವಲೋಕನಗೊಂಡಿವೆ. ಪಾಶ್ಚಾತ್ಯ ಸಾಹಿತ್ಯ ಕೃತಿಗಳ ಮಹತ್ವವನ್ನು ಹಲವರು ತಿಳಿಸಿದ್ದಾರೆ’ ಎಂದು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ತಿಳಿಸಿದರು.

‘ಮನಸ್ಸಿಗೆ ಮುದ ನೀಡುವ ಲೋಕವನ್ನು ವಿಭಿನ್ನ ಆಯಾಮಗಳಲ್ಲಿ ಕಂಡು ಅವುಗಳಿಗೆ ಅಕ್ಷರ ರೂಪ ನೀಡಿ, ಓದುಗರಿಗೆ ನೀಡಿದ ಹಲವರ ಕೃತಿಗಳನ್ನು ಆಕಾಶವಾಣಿ ಪರಿಚಯಿಸುತ್ತಿದೆ’ ಎಂದು ಸಾಹಿತ್ಯ ಪ್ರೇಮಿ ಮೌನೇಶ ಹೇಳಿದರು.

‘ಏಕ ಕಾಲಕ್ಕೆ ಪ್ರಸಾರಕ್ಕೆ ಪ್ರಸ್ತಾವ’

ಓದುಗರನ್ನು ಗ್ರಂಥಾಲಯದತ್ತ ಸೆಳೆಯಲು ‘ಪುಸ್ತಕ ಪ್ರೀತಿ’ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಆಕಾಶವಾಣಿ ನಿಲಯಗಳಿಂದ ಏಕಕಾಲಕ್ಕೆ ಪ್ರಸಾರ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ ಕುಮಾರ್ ಎಸ್.ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT