ಹುಬ್ಬಳ್ಳಿ: ಪಕ್ಕದ ಧಾರವಾಡಕ್ಕೆ ಹೋಲಿಸಿದರೆ ಹುಬ್ಬಳ್ಳಿಯಲ್ಲಿ ಸುರಿಯುವ ಮಳೆ ಏನೇನೂ ಅಲ್ಲ. ಆದರೆ, ಶನಿವಾರ ಸಂಜೆ ಮುಗಿಲೇ ತೂತು ಬಿದ್ದಂತೆ ನಗರದಲ್ಲಿ ಒಂದೂವರೆ ತಾಸು ಭಾರಿ ಮಳೆ ಸುರಿಯಿತು.
ಮಳೆ ಆರಂಭಕ್ಕೂ ಮುನ್ನ ‘ಗುಡುಗುಡು ಮುತ್ಯಾ’ನ ಶಬ್ದ ಕೇಳಿ ಮೈನಡುಗಿಸಿತು. ಛಕ್ಕನೆ ಮೂಡಿದ ಮಿಂಚಿನ ಹಿಂದೆಯೇ ಅಪಾಯಕಾರಿ ಸಿಡಿಲುಗಳು ಜನರ ಎದೆಯನ್ನು ನಡುಗಿಸಿದವು.
ಜೋರಾಗಿ ಗಾಳಿ ಬೀಸಿತು, ಇನ್ನೇನು ಮಳೆಯೂ ನಿಂತುಬಿಟ್ಟಿತು ಎನ್ನುವಾಗಲೇ ಇನ್ನಷ್ಟು ವೇಗ ಪಡೆಯಿತು. ದ್ವಿತೀಯಾರ್ಧದಲ್ಲಿ ಆಲಿಕಲ್ಲುಗಳು ಸುರಿಯಲು ಆರಂಭಿಸಿದವು. ಇದರ ಮಧ್ಯೆಯೇ ಬಿಆರ್ಟಿಎಸ್ ಬಸ್ಸುಗಳು ಒಂದಾದ ಮೇಲೆ ಒಂದರಂತೆ ಸಂಚರಿಸುತ್ತಲೇ ಇದ್ದವು.
ಶನಿವಾರ ರಾಮನವಮಿ ಇತ್ತು. ಮಳೆಯಿಂದಾಗಿ ಅದರ ಸಡಗರಕ್ಕೇನೂ ಅಡ್ಡಿಯಾಗಲಿಲ್ಲ. ದಾಜೀಬಾನಪೇಟೆಯಲ್ಲಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಶ್ರೀರಾಮ–ಹನುಮಂತನ ಮೂರ್ತಿಯ ಎದುರು ಯುವಕರು ಸುರಿವ ಮಳೆಯಲ್ಲೇ ಡಿ.ಜೆ.ಹಚ್ಚಿ ಕುಣಿದು ಕುಪ್ಪಳಿಸಿದರು.