ಧಾರವಾಡ: ನಗರದ ರಂಗಾಯಣ ನೌಕರರು ಮತ್ತು ಕಲಾವಿದರಿಗೆ ಕೆಲ ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳ ಇಲ್ಲದೆ ಅವರು ಪರಿತಪಿಸುವಂತಾಗಿದೆ.
ಆಡಳಿತಾಧಿಕಾರಿ, ಎಸ್ಡಿಎ, ಎಫ್ಡಿಎ, ಮೂವರು ‘ಡಿ’ ಗ್ರೂಪ್ ನೌಕರರು ಇದ್ದಾರೆ. ಈ ಪೈಕಿ ಆಡಳಿತಾಧಿಕಾರಿಗೆ ಒಂದು ವರ್ಷದಿಂದ ವೇತನ ಬಾಕಿ ಇದೆ. ಇತರ ನೌಕರರಿಗೂ ಕೆಲ ತಿಂಗಳಿನಿಂದ ಸಂಬಳ ಬಾಕಿ ಇದೆ.
11 ಕಲಾವಿದರ ಪೈಕಿ ಮೂವರು ರಾಜೀನಾಮೆ ನೀಡಿದ್ಧಾರೆ. ಬಾಕಿ ಎಂಟು ಕಲಾವಿದರಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ.
‘ನಮಗೆ ಎರಡು ತಿಂಗಳಿನಿಂದ ಸಂಬಳ ಇಲ್ಲ. ಸಂಬಳ ಕೇಳಿದರೆ ಅನುದಾನ ಕೊರತೆ ಎಂದು ಹೇಳುತ್ತಾರೆ. ನಿರ್ದೇಶಕರ ಹುದ್ದೆ ತೆರವಾಗಿ ನಾಲ್ಕು ತಿಂಗಳಾಗಿದೆ. ಹೊಸಬರನ್ನು ನೇಮಿಸಿಲ್ಲ. ನಾಟಕಗಳು ನಡೆಯುತ್ತಿಲ್ಲ’ ಎಂದು ಕಲಾವಿದ ಯೋಗೇಶ ಬಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಂಗಾಯಣದಲ್ಲಿ ಈಚೆಗೆ ಕೆಲವು ಸಣ್ಣ ಚಟುವಟಿಕೆಗಳು ಬಿಟ್ಟರೆ ನಾಟಕ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕಾರ್ಯಕ್ರಮ, ಚಟುವಟಿಕೆಗಳು ಕಡಿಮೆಯಾಗಿರುವುದು ಕಲಾವಿದರು, ರಂಗಾಸಕ್ತರಿಗೆ ಬೇಸರ ಮೂಡಿಸಿದೆ.
ರಂಗಾಯಣಕ್ಕೆ ವೇತನ, ಚಟುವಟಿಕೆಗಳಿಗೆ ವಾರ್ಷಿಕ ಸುಮಾರು ₹ 54 ಲಕ್ಷ ಅನುದಾನ ಬೇಕು. ಸರ್ಕಾರ ಅನುದಾನ ಒದಗಿಸಲು ವಿಳಂಬ ಮಾಡುತ್ತಿದೆ ಎಂಬುದು ನೌಕರರು, ಕಲಾವಿದರ ದೂರು.
ನಿರ್ದೇಶಕರನ್ನು ನೇಮಿಸಿದರೆ ನಿಯಮಿತವಾಗಿ ಚಟುವಟಿಕೆಗಳನ್ನು ನಡೆಸಲು ಅವರು ಕ್ರಮ ವಹಿಸುತ್ತಾರೆ. ಸರ್ಕಾರ ತಕ್ಷಣವೇ ಇತ್ತ ಗಮನ ಹರಿಸಿ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕಲಾವಿದರು ಒತ್ತಾಯಿಸುತ್ತಾರೆ.
‘ರಂಗಾಯಣಕ್ಕೆ ಮೂರು ತಿಂಗಳಿಗೊಮ್ಮೆ ಅನುದಾನ ಬಿಡುಗಡೆ ಮಾಡುತ್ತಾರೆ. ಈಗ ಮೊದಲ ಹಂತದಲ್ಲಿ ಅನುದಾನ ಮಂಜೂರಾಗಿದ್ದು, ಮೂರು ದಿನಗಳಲ್ಲಿ ಬಿಡುಗೆಯಾಗಲಿದೆ ಎಂದು ಇಲಾಖೆಯವರು ತಿಳಿಸಿದ್ದಾರೆ. ಈಗ ₹15 ಲಕ್ಷ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಎಂದು ರಂಗಾಯಣದ ಅಧಿಕಾರಿಯೊಬ್ಬರು ತಿಳಿಸಿದರು.
ರಂಗಾಯಣದಲ್ಲಿ ನಾಟಕಗಳ ಪ್ರದರ್ಶನ ಹೆಚ್ಚಬೇಕು. ನಾಟಕದ ಕಡೆಗೆ ಒಲವು ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಆದ್ಯ ಗಮನ ಹರಿಸಬೇಕು ಎಂದು ರಂಗಾಸಕ್ತರು ಹೇಳುತ್ತಾರೆ.
11 ಕಲಾವಿದರ ಪೈಕಿ ಮೂವರು ರಾಜೀನಾಮೆ ನಾಲ್ಕು ತಿಂಗಳಿನಿಂದ ನಿರ್ದೇಶಕ ಹುದ್ದೆ ಖಾಲಿ ಅನುದಾನ ಬಿಡುಗಡೆಗೆ ನೌಕರರು, ಕಲಾವಿದರ ಮೊರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.