ನವಲಗುಂದ: ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದ ಸದೃಢ ಸಮಾಜ ಕಟ್ಟಲು ಸಾಧ್ಯವೆಂದು ರೇಣುಕಾಚಾರ್ಯರು ಸಂದೇಶ ನೀಡಿದ್ದರು. ಅವರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಪಂಚಗೃಹ ಹಿರೇಮಠ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಪಂಚಗೃಹ ಹಿರೇಮಠದಲ್ಲಿ ಶ್ರೀ ಶಾಂಭವಿ ಮಹಿಳಾ ಮಂಡಳ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತಿ ಅಂಗವಾಗಿ ನಡೆದ ಧರ್ಮ ಸಭೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜ ಏಳ್ಗೆಗಾಗಿ ಎಲ್ಲರೂ ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನು ಅಳವಡಿಕೊಳ್ಳಬೇಕೆಂದು ಕರೆ ನೀಡಿದರು.
ಭೀಮರಾಶಿ ಹೂಗಾರ, ವೇದಮೂರ್ತಿ ಕುಮಾರ ಸ್ವಾಮಿ, ಹಿರೇಮಠ ಮಾತನಾಡಿದರು. ಶೋಭಾ ಕಲ್ಲಯ್ಯನಮಠ ಸಂಗಡಿಗರಿಂದ ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು. ಜಯಶ್ರೀ ಕೇರಿಮಠ, ವಂದಿಸಿದರು.
ಇದೇ ಸಂದರ್ಭದಲ್ಲಿ ಭೀಮರಾಶಿ ಹೂಗಾರ, ರತ್ನಾ ಸಂಗಟಿ, ಕುಮಾರಸ್ವಾಮಿ ಹಿರೇಮಠ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಕರ್ತೃ ಸಿದ್ದೇಶ್ವರ ಗದ್ದುಗೆಗೆ ರುದ್ರಾಭೀಷೇಕ ನಡೆಯಿತು. ನಂತರ ಮಹಾ ಪ್ರಸಾದ ಸೇವೆ ಜರುಗಿತು.