ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕ್ಲೀನ್ ಸಿಟಿಗೆ ಮುಂದಾದ ರೆವಲ್ಯೂಷನ್ ಮೈಂಡ್ಸ್ ಯುವಪಡೆ

ವಾರಾಂತ್ಯದಲ್ಲಿ ಜಾಗೃತಿಗಾಗಿ ಶ್ರಮಿಸುತ್ತಿರುವ ‘ರೆವಲ್ಯೂಷನ್ ಮೈಂಡ್ಸ್’ ತಂಡ
Last Updated 14 ನವೆಂಬರ್ 2022, 14:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿರುವ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಯ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜನರ ಗಮನ ಸೆಳೆಯುವುದರೊಂದಿಗೆ ಸ್ವಚ್ಛತಾ ಜಾಗೃತಿ ಮೂಡಿಸುವಲ್ಲಿ ಹುಬ್ಬಳ್ಳಿಯ ‘ರೆವಲ್ಯೂಷನ್ ಮೈಂಡ್ಸ್’ ಎಂಬ ಉತ್ಸಾಹಿ ಯುವಕರ ತಂಡ ನಿರತವಾಗಿದೆ.

ಎಂಜಿನಿಯರ್ ವಿದ್ಯಾರ್ಥಿಯಾಗಿರುವ ವಿನಾಯಕ ಜೋಗಾರಶೆಟ್ಟರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಯುವಕ-ಯುವತಿಯರು ಈ ಕಾರ್ಯದಲ್ಲಿ ಸಕ್ರಿಯವಾಗಿದ್ದಾರೆ. ಈಗಾಗಲೇ ಹೊಸ ಬಸ್ ನಿಲ್ದಾಣ, ಗೋಕುಲ ರಸ್ತೆ, ಕೇಶ್ವಾಪುರ, ಕೋಟಿಲಿಂಗೇಶ್ವರ ನಗರ, ನವನಗರದ ಸ್ಕೈಪಾತ್, ಹೊಸೂರ ಟರ್ಮಿನಲ್ ಸೇರಿದಂತೆ ಅನೇಕ ಕಡೆ ಗೋಡೆಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿ, ಜಾಗೃತಿಯೊಂದಿಗೆ ಸ್ವಚ್ಛತೆ ಕಾಪಾಡುವಂತೆ ತಿಳಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ಅವಳಿ ನಗರದ ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸುಂದರವಾಗಿಸುವ ಈ ತಂಡ, ಸರ್ಕಾರಿ ಶಾಲೆ ಗೋಡೆಗಳನ್ನು ಅಂದವಾಗಿಸುತ್ತಿವೆ. ಪ್ರಸ್ತುತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ‘ಮೈ ಸಿಟಿ, ಮೈ ಡ್ಯೂಟಿ’ ಎಂಬ ಘೋಷವಾಕ್ಯದಡಿ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ಆವರಣದ ಗೋಡೆಗಳನ್ನು ಸುಂದರಗೊಳಿಸುತ್ತಿದ್ದಾರೆ. ಗೋಡೆ ಮೇಲೆ ನಮ್ಮ ದೇಶದ ಕಲೆ, ಸಂಸ್ಕೃತಿ, ಮಕ್ಕಳನ್ನು ಸೆಳೆಯುವ ಕಾರ್ಟೂನ್‍ಗಳ ಮೂಲಕ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಹಾಗೂ ಟ್ರಾಫಿಕ್ ಸಿಗ್ನಲ್‍ಗಳನ್ನು ಪಾಲಿಸುವ ಸಂದೇಶವುಳ್ಳ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.

‘ಅವಳಿ ನಗರದಲ್ಲಿ ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕಂಡ ಕಂಡಲ್ಲಿ ಜನ ಗುಟ್ಕಾ, ಎಲೆ-ಅಡಿಕೆ ಜಗಿದು ಉಗುಳುತ್ತಾರೆ. ಇದರಿಂದ ನಗರವೆಲ್ಲಾ ಗಲೀಜಾಗಿ ಕಾಣುತ್ತಿದೆ. ಬದಲಾಗಿ ಎನ್ನುವ ಬದಲು, ನಾವೇ ಬದಲಾವಣೆ ಆರಂಭಿಸುವುದು ಉತ್ತಮ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ರೆವಲ್ಯೂಷನ್ ಮೈಂಡ್ಸ್ ತಂಡದ ಸ್ಥಾಪಕ ವಿನಾಯಕ ಜೋಗಾರಶೆಟ್ಟರ್.

‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗೋಕುಲ ರಸ್ತೆ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರ, ಮಹನೀಯರ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ಎಲ್ಲರ ನೆಚ್ಚಿನ ನಟ ಅಪ್ಪು ಅವರ ಚಿತ್ರ ಬಿಡಿಸಿದ್ದೇವೆ. ಅನೇಕರು ಇದನ್ನು ಕಂಡು ಸಂತೋಷಪಟ್ಟಿದ್ದಾರೆ. ಈಗ ಅಲ್ಲಿ ಉಗುಳುವುದು ಕಡಿಮೆಯಾಗಿದ್ದು ಜನ ಜಾಗೃತರಾಗಿ, ನಗರವನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ, ನಮ್ಮ ಕೆಲಸವೂ ಸಾರ್ಥಕವಾಗಿದೆ’ ಎಂದು ಸಂತಸಪಟ್ಟರು.

‘ಆರು ವರ್ಷದಿಂದ ಈ ಕಾರ್ಯ ಮಾಡುತ್ತಿದ್ದೇವೆ. ನಮ್ಮ ತಂಡದವರಷ್ಟೇ ಅಲ್ಲದೇ ಪ್ರತಿ ಸಲ ಗೋಡೆಗಳಿಗೆ ಬಣ್ಣ ಬಳಿಯುವ ಮುನ್ನ ಆನ್‍ಲೈನ್ ಮೂಲಕ ಸಾರ್ವಜನಿಕರಿಗೂ ಮುಕ್ತ ಆಹ್ವಾನ ನೀಡುತ್ತೇವೆ. ಆಸಕ್ತರು ನಮ್ಮ ತಂಡದೊಂದಿಗೆ ಕೈ ಜೋಡಿಸಿ, ಸಂತಸ ಪಟ್ಟಿದ್ದಾರೆ’ ಎಂದು ಅವರು ತಿಳಿಸಿದರು.

ಕೇವಲ ಗೋಡೆಗಳಿಗೆ ಬಣ್ಣ ಬಳಿಯುವುದಷ್ಟೆ ಅಲ್ಲದೇ ಅನಾಥಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವ ಈ ಯುವಕರ ತಂಡ ಪ್ರಸ್ತುತ ಯುವಜನಾಂಗಕ್ಕೆ ಮಾದರಿಯಾಗಿದೆ.

ಧೀಮಂತ ಪ್ರಶಸ್ತಿ ಗೌರವ

ರೆವಲ್ಯೂಷನ್ ಮೈಂಡ್ಸ್ ತಂಡದ ಸಾಮಾಜಿಕ ಕಾರ್ಯ ಮೆಚ್ಚಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ‘ಧೀಮಂತ ಪ್ರಶಸ್ತಿ’ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT