ಹುಬ್ಬಳ್ಳಿ: ವಿದ್ಯಾನಗರ ಬಿಆರ್ಟಿಎಸ್ ಬಸ್ ನಿಲ್ದಾಣದ ವಿಭಜಕಕ್ಕೆ ಮಂಗಳವಾರ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸ್ಗೆ ದಾಖಲಾಗಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ: ಸೇನೆ ಅಧಿಕಾರಿ ಎಂಬ ಸೋಗಿನಲ್ಲಿ ಮನೆ ಬಾಡಿಗೆ ಪಡೆಯುವುದಾಗಿ ಸುಳ್ಳು ಹೇಳಿ ಮನೆ ಮಲೀಕರಿಗೆ ₹80,000 ವಂಚಿಸಿದ ಘಟನೆ ಇತ್ತೀಚೆಗೆ ನಡೆದಿದೆ.ಹೊಸೂರಿನ ಗಣೇಶ ಪಾರ್ಕ್ ನಿವಾಸಿ ಪ್ರಿಯದರ್ಶಿನಿ ಅವರು ಒಎಲ್ಎಕ್ಸ್ನಲ್ಲಿ ತಮ್ಮ ಮನೆ ಬಾಡಿಗೆಗೆ ಇದೆ ಮಾಹಿತಿ ಹಾಕಿದ್ದರು. ತಾನು ಸೇನೆಯ ಅಧಿಕಾರಿ, ಪೂನಾದಿಂದ ಹುಬ್ಬಳ್ಳಿಗೆ ವರ್ಗಾವಣೆಯಾಗಿದೆ ಎಂದು ಹೇಳಿ ಮನೆ ಬಾಡಿಗೆಗೆ ಕೇಳಿದ್ದಾನೆ. ಮುಂಗಡ ಹಣ ಪಾವತಿಸಲು ತನ್ನ ಖಾತೆಯಲ್ಲಿ ಹಣವಿಲ್ಲ, ₹1 ಲಕ್ಷ ವರ್ಗಾಯಿಸಿದರೆ, ₹1.20 ಲಕ್ಷ ಹಿಂದಿರುಗಿಸುವುದಾಗಿ ನಂಬಿಸಿದ್ದಾನೆ. ಹಂತ ಹಂತವಾಗಿ ₹80,000 ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಗಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹73 ಸಾವಿರ ವಂಚನೆ: ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಿಚಾರಿಸಲು ಗೂಗಲ್ನಲ್ಲಿ ಪ್ರಮೋದ್ ಬಿಹಾರಿ ಎಂಬುವರು ಸರ್ಚ್ ಮಾಡಿದಾಗ, ಆರೋಪಿಗಳು ₹73,560 ವರ್ಗಾಯಿಸಿಕೊಂಡು ವಂಚಿಸಿದ್ದಾರೆ.ಪ್ರಮೋದ್ ಅವರ ಮೊಬೈಲ್ನಲ್ಲಿ ಎನಿ ಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಿಸಿ, ಎಸ್ಬಿಐ ಕ್ರೆಡಿಟ್ ಕಾರ್ಡ್ನಿಂದ ₹24,562 ಹಾಗೂ ಡೆಬಿಟ್ ಕಾರ್ಡ್ನಿಂದ ₹48,998 ವರ್ಗಾಯಿಸಿಕೊಂಡಿದ್ದಾಗಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ವಂಚನೆ: ಓಲಾ ಕಸ್ಟಮರ್ ಕೇರ್ ಎಂದು ಗೂಗಲ್ನಲ್ಲಿದ್ದ ನಂಬರ್ ಕರೆ ಮಾಡಿ, ವಾಹನ ಖರೀದಿಸಲು ಮುಂದಾದ ಕೇಶ್ವಾಪುರದ ನಾಗಶೆಟ್ಟಿಕೊಪ್ಪದ ನಿವಾಸಿ ಎ.ವೈ. ಮದಬಾವಿ ಅವರಿಂದ ₹38,290 ಹಣ ಪಡೆದು ವಂಚಿಸಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬೆದರಿಕೆ: ಅರುಣ ಹಾನಗಲ್ ಎಂಬಾತ ನಗರದಲ್ಲಿ ಮಹಿಳೆಯೊಬ್ಬರನ್ನು ಅವಾಚ್ಯವಾಗಿನಿಂದಿಸಿ, ಆಸಿಡ್ ಹಾಕುವ ಬೆದರಿಯೊಡ್ಡಿದ್ದಾಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.