ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಅರವಿಂದ ನಗರದ ಒಂದನೇ ಕ್ರಾಸ್ ರಸ್ತೆಯಲ್ಲಿ ಕಸದ ರಾಶಿ ಇರುವುದರಿಂದ, ಸಾರ್ವಜನಿಕರು ಮೂಗು ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಪಾಲಿಕೆಯ ಕಸ ಸಂಗ್ರಹಣ ವಾಹನಗಳಿಗೆ ಕಸ ನೀಡದೆ, ರಸ್ತೆಯಲ್ಲಿ ತಂದು ಹಾಕುತ್ತಾರೆ. ಇದರಿಂದ ನಿತ್ಯ ಅಲ್ಲಿ ಕಸದ ರಾಶಿ ಇರುತ್ತದೆ.
ಕಸದಿಂದಾಗಿ ಸ್ಥಳದಲ್ಲಿ ಸೊಳ್ಳೆಗಳು, ನಾಯಿಗಳು ಹಾಗೂ ಹಂದಿಗಳ ಕಾಟ ಹೆಚ್ಚಾಗಿದೆ. ಮಕ್ಕಳು, ಹಿರಿಯರು ಓಡಾಡುವುದು ಕಷ್ಟವಾಗಿದೆ. ಕಸ ಹಾಕುವವರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ದಂಡ ವಿಧಿಸಿ ಎಚ್ಚರಿಕೆ ನೀಡಬೇಕು.
– ಸ್ಥಳೀಯರು, ಅರವಿಂದ ನಗರ
ರಸ್ತೆಯಲ್ಲಿ ಹೊಂಡ
ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಣಕಲ್ ಕ್ರಾಸ್ನಿಂದ ಟಿಂಬರ್ ಯಾರ್ಡ್ ಕಡೆಗೆ ಹೋಗುವ ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿವೆ. ಮಳೆ ಕಮ್ಮಿಯಾದರೂ ಈ ಹೊಂಡದಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.
ಉಣಕಲ್ ರೈಲು ನಿಲ್ದಾಣ ಹಾಗೂರೈಲ್ವೆ ಕೆಳ ಸೇತುವೆ ಮೂಲಕ ಅಲ್ಲಿಂದ ಸಾಯಿನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ತೀವ್ರ ಹದಗೆಟ್ಟಿದೆ. ಸಂಬಂಧಪಟ್ಟವರು ರಸ್ತೆಯಲ್ಲಿರುವ ಹೊಂಡ ಹಾಗೂ ತಗ್ಗುಗಳನ್ನು ಮುಚ್ಚಬೇಕು.
– ಸಾಯಿನಗರ ನಿವಾಸಿಗಳು
ತ್ಯಾಜ್ಯದಿಂದ ತೊಂದರೆ
ಉಪ್ಪಿನಬೆಟಗೇರಿ: ಗ್ರಾಮದ 7ನೇ ವಾರ್ಡ್ನಲ್ಲಿರುವ ವಿದ್ಯುತ್ ಸರಬರಾಜು ಕಚೇರಿ ಎದುರು ಮತ್ತು ಈದ್ಗಾ ಮೈದಾನಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡಿದೆ.
ಕಸದ ರಾಶಿಗೆ ಮುತ್ತಿಗೆ ಹಾಕುವ ನಾಯಿಗಳು ಹಾಗೂ ಇತರ
ಬಿಡಾಡಿ ಪ್ರಾಣಿಗಳಿಂದ ಕಸಗಳು ರಸ್ತೆ ತುಂಬಾ ಚೆಲ್ಲಾಡಿರುತ್ತವೆ. ಜತೆಗೆ ಕಸ ವಿಲೇವಾರಿ ಆಗದ ಕಾರಣ ದುರ್ನಾತ ಬೀರುತ್ತಿದೆ. ಗ್ರಾಮ ಪಂಚಾಯ್ತಿ ಸಿಬ್ಬಂದಿ ಕೂಡಲೇ ಇದನ್ನು ತೆರವುಗೊಳಿಸಿ, ಗ್ರಾಮದ ನೈರ್ಮಲ್ಯ ಕಾಪಾಡಬೇಕು.
–ಸ್ಥಳೀಯ ನಿವಾಸಿಗಳು
27 ವರ್ಷದ ಸಮಸ್ಯೆಗೆ ಮುಕ್ತಿ ಕೊಡಿ
ಧಾರವಾಡ: ಇಲ್ಲಿನ ಹಳಿಯಾಳ ರಸ್ತೆಯಲ್ಲಿರುವ ತುಂಗಭದ್ರಾ ಕಾಲೊನಿ ಮೊದಲನೇ ಅಡ್ಡರಸ್ತೆಯಲ್ಲಿ ಮಳೆ ಬಂದರೆ ಸಾಕು, ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ 27 ವರ್ಷಗಳಿಂದ ಈ ಸಮಸ್ಯೆ ಇದೆ. ರಾಜಕೀಯ ಮುಖಂಡರು, ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಈವರೆಗೂ ಸಿಗಲಿಲ್ಲ. ಇನ್ನಾದರೂ ಬಡಾವಣೆ ಜನರ ಸಮಸ್ಯೆ ಪರಿಹರಿಸಬೇಕು.
–ಬಡಾವಣೆ ನಿವಾಸಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.