ಕುಂದಗೋಳ: ‘ನನ್ನ ಪತಿ ಹಾಗೂ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ತೃತಿಯ ಪುಣ್ಯಸ್ಮರಣೆ ಹಾಗು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ. 20ರಂದು ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆಯಲಿದೆ’ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಯರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ಸಿ.ಎಸ್.ಶಿವಳ್ಳಿ ಅವರ ಸಮಾಧಿ ಬಳಿ ಪತ್ರಿಕಾಗೋಷ್ಠಿ ನಡೆಸಿದ ಅವರು ‘ನನ್ನ ಪತಿ ಶಾಸಕ ಹಾಗೂ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ’ ಎಂದರು. ಶನಿವಾರ ಯರಗುಪ್ಪಿ ಗ್ರಾಮದಲ್ಲಿ ಮೂರ್ತಿ ಮೆರವಣಿಗೆ ಜರುಗಲಿದೆ.
20ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಕಲ್ಯಾಣಪುರದ ಬಸವಣ್ಣಜ್ಜನವರು, ಬೆಳಗಾವಿ ಮುಕ್ತಿಮಠದದ ಶಿವಯೋಗಿಶ್ವರ ಸ್ವಾಮೀಜಿ, ಮನಸೂರದ ಬಸವರಾಜ ದೇವರು ವಹಿಸಲಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೂರ್ತಿ ಅನಾವರಣ ಮಾಡಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದಿ.ಸಿ.ಎಸ್.ಶಿವಳ್ಳಿ ಅವರ ಸಹೋದರ ಅಡಿವೆಪ್ಪ ಶಿವಳ್ಳಿ, ಬಾಬಣ್ಣ ಬೆಟಗೇರಿ, ಅಡಿವೇಪ್ಪ ಶಿವಳ್ಳಿ, ಸಿದ್ದಪ್ಪ ಹುಣ್ಣಸಣ್ಣವರ, ಶಿವಾನಂದ ಪೂಜಾರ, ಸಿ.ಜಿ.ಪಾಟೀಲ, ಯಲ್ಲಪ್ಪ ಮಾಯಣ್ಣವರ, ಮಾಂತೇಶ ತಡಸದ, ಚಿದಾನಂದ ಕುಸುಗಲ್, ಲೋಕೇಶ ಸರಾವರಿ ಎಚ್.ಎಸ್. ಲಕ್ಷ್ಮೇಶ್ವರ ಇದ್ದರು.