ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಎನ್ನುವುದು ಕಾರ್ಯದಲ್ಲಿ ತೋರಿಸಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ, ಬೆಳಗಾವಿ ವಿಭಾಗದ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ವರ್ಗ: ಜೋಶಿ ಹೇಳಿಕೆ
Last Updated 30 ಅಕ್ಟೋಬರ್ 2020, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿಸ್ತು, ಸಿದ್ದಾಂತ ಮತ್ತು ವೈಚಾರಿಕತೆ ವಿಷಯದಲ್ಲಿ ನಾವು ಭಿನ್ನ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ವಿಚಾರಗಳನ್ನು ನೀವೆಲ್ಲರೂ ಕೆಲಸಗಳ ಮೂಲಕ ತೋರಿಸಿಕೊಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.

ಕುಸುಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಶುಕ್ರವಾರ ನಡೆದ ಧಾರವಾಡ ಮತ್ತು ಬೆಳಗಾವಿ ವಿಭಾಗದ ಬಿಜೆಪಿ ಪ್ರಮುಖರ ಪ್ರಶಿಕ್ಷಣ ಪ್ರಕೋಷ್ಠ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಜಕಾರಣವೆಂದರೆ ಕೇವಲ ಅಧಿಕಾರ ಪಡೆಯುವುದು, ಜನರನ್ನು ಆಳುವುದಲ್ಲ. ಪ್ರತಿಯೊಬ್ಬ ಕಾರ್ಯಕರ್ತ ಸ್ವಚಾರಿತ್ರ್ಯ, ಆತ್ಮಗೌರವ ಕಾಪಾಡಿಕೊಂಡು ಪಕ್ಷದ ಘನತೆ ಹೆಚ್ಚಿಸಬೇಕು. ನಾವು ಭಿನ್ನವಾಗಿ ಯೋಚಿಸಿ, ಯೋಜಿಸಿ ಅವುಗಳನ್ನು ಕಾರ್ಯರೂಪಕ್ಕೆ ತಂದಾಗ ಜನರಿಗೆ ಹತ್ತಿರವಾಗುತ್ತೇವೆ. ಅವರೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ’ ಎಂದರು.

‘ಎಲ್ಲ ಕಾರ್ಯಕರ್ತರು ಕಾಯಾ, ವಾಚಾ ಮತ್ತು ಮನಃಪೂರ್ವಕವಾಗಿ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬಿಜೆಪಿ ಹೊರತುಪಡಿಸಿದರೆ ಉಳಿದ ಯಾವ ಪಕ್ಷಗಳಲ್ಲಿಯೂ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿಕೊಡುವುದಿಲ್ಲ. ಈ ಅವಕಾಶ ಬಳಸಿಕೊಂಡು ಕಾರ್ಯಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಬಿಜೆಪಿ ಹೊರತು ಪಡಿಸಿ ಉಳಿದ ಎಲ್ಲ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿವೆ. ತಳಮಟ್ಟದಿಂದ ಗಟ್ಟಿ ಬುನಾದಿ ಹೊಂದಿರುವ ಬಿಜೆಪಿಗೆ ಮಾತ್ರ ಪ್ರಬಲ ರಾಷ್ಟ್ರ ನಿರ್ಮಾಣ ಸಾಧ್ಯ. ಬಿಜೆಪಿ ದೇಶದ ಜನರಿಗೆ ರಾಷ್ಟ್ರೀಯ ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ’ ಎಂದರು.

ಬೆಳಗಾವಿ ವಿಭಾಗದ ಸಂಚಾಲಕ ಶ್ರೀಕಾಂತ ಕುಲಕರ್ಣಿ ಮಾತನಾಡಿ ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ದೇಶದಾದ್ಯಂತ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದ್ದು, ಇದರಲ್ಲಿ ಪಾಲ್ಗೊಂಡವರು ತಮ್ಮ ವ್ಯಾಪ್ತಿಯ ಕಾರ್ಯಕರ್ತರಿಗೆ ಪಕ್ಷದ ನಿಲುವು, ಸಿದ್ದಾಂತ ಮತ್ತು ಯೋಜನೆಗಳನ್ನು ಮುಟ್ಟಿಸಬೇಕು’ ಎಂದು ತಿಳಿಸಿದರು.

ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಸಹಪ್ರಭಾರಿ ನಾರಾಯಣ ಜರತಾರಘರ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ, ಗಣೇಶ ಕಾರ್ಣಿಕ್‌, ಶಾಸಕರಾದ ಅಭಯ ಪಾಟೀಲ, ಅನಿಲ ಬೆಣಕೆ ಮಾಜಿ ಶಾಸಕರಾದ ಯು.ಬಿ.ಬಣಕಾರ, ಸೀಮಾ ಮಸೂತಿ, ರಾಜ್ಯ ಪ್ರಧಾನ ಕಾರ್ಯದರ್ಶಿಮಹೇಶ ಟೆಂಗಿನಕಾಯಿ, ಗಿರೀಶ ಪಾಟೀಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ವಿಜಯಾನಂದ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ಪಕ್ಷದ ವಕ್ತಾರ ರವಿ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT