ಹುಬ್ಬಳ್ಳಿ: ‘ಶಾಸಕ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲವಿಲ್ಲದೇ ವರುಣಾ ಕ್ಷೇತ್ರದಲ್ಲಿಯೂ ಸಿದ್ದರಾಮಯ್ಯ ಗೆಲ್ಲಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಲಾರದಿಂದಲೂ ಕೂಡ ಸ್ಪರ್ಧಿಸ ಬೇಡಿ ಎಂದು ಸಲಹೆ ನೀಡಿದ್ದೇನೆ. ಅಷ್ಟೇ ಅಲ್ಲ, ಸಿದ್ದರಾಮಯ್ಯಗೆ ಎರಡು ಬಾರಿ ನಾನು ರಾಜಕೀಯ ಜೀವನ ನೀಡಿದೆ. ಆದರೂ ಕೃತಜ್ಞತೆ ಇಲ್ಲ’ ಎಂದರು.
‘ಕುಪೇಂದ್ರ ರೆಡ್ಡಿ ಅವರನ್ನು ಗೆಲ್ಲಿಸುವಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಏಜೆಂಟ್ ಆಗಿ ಕೆಲಸ ಮಾಡಿದ್ದರು. ನಿಮ್ಮ ಪಕ್ಷದವರನ್ನು ಬೇರೆ ಪಕ್ಷಕ್ಕೆ ಕಳಿಸಿ, ಅಲ್ಲಿ ಮೇಯ್ರಿ, ಇಲ್ಲಿ ಬರ್ರಿ ಎನ್ನುತ್ತೀರಾ. ನಮಗೆ ಬಿ ಟೀಂ ಅಂತೀರಾ’ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ತಮ್ಮ ಅಣ್ಣ ಭಾಗಿಯಾಗಿದ್ದ ಬ್ಯಾಂಕ್ ಹಗರಣವನ್ನು ಮುಚ್ಚಿ ಹಾಕಿದರು’ ಎಂದು ಟೀಕಿಸಿದ ಇಬ್ರಾಹಿಂ, ಶಾಸಕ ಜಗದೀಶ ಶೆಟ್ಟರ್ ವಿರುದ್ಧವೂ ಹರಿಹಾಯ್ದರು.
‘ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸಿದ್ದೇ ನಿಮ್ಮ ಸಾಧನೆಯೇ? ಮೇಲ್ಸೇತುವೆ ನಿರ್ಮಿಸುವ ಅವಕಾಶವಿದ್ದರೂ, ಬೈರಿದೇವರಕೊಪ್ಪದಲ್ಲಿ ದರ್ಗಾ ಉರುಳಿಸಿದಿರಿ. ಅದಕ್ಕಾಗಿ ಬೊಮ್ಮಾಯಿ ಕ್ಷಮೆ ಕೇಳಿದರು. ಸಮಾಜದ ಜನರೂ ಶಾಂತ ರೀತಿಯಲ್ಲಿ ವರ್ತಿಸಿದ್ದರಿಂದ ಯಾವುದೇ ಅನಾಹುತ ಆಗಲಿಲ್ಲ’ ಎಂದರು.