ಹುಬ್ಬಳ್ಳಿ: ಹಾವು ಹಿಡಿಯುವಾಗ ಸ್ನೇಕ್ ವಿಶ್ವನಾಥ ಅವರಿಗೆ ಬುಧವಾರ ಹಾವು ಕಚ್ಚಿದೆ. ಕೂಡಲೇ ಹಿಡಿದ ಹಾವಿನೊಂದಿಗೆ ಅವರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಹಾವು ನೋಡಿ ಕಿಮ್ಸ್ ಸಿಬ್ಬಂದಿ ಕೆಲಕಾಲ ಗಾಬರಿಯಾಗಿದ್ದರು.
ಜಗದೀಶ ನಗರದ ನಿವಾಸಿ ವಿಶ್ವನಾಥ ಭಂಡಾರಿ ಎಂಬ ಯುವಕ ಕಳೆದ ಹಲವು ವರ್ಷಗಳಿಂದ ಹಾವು ಹಿಡಿಯುತ್ತಿದ್ದಾರೆ. ಬುಧವಾರ ಅವರ ಮನೆ ಸಮೀಪ ಹಾವು ಬಂದಿರುವ ವಿಷಯ ಗೊತ್ತಾಗಿದೆ. ಹಾವು ಹಿಡಿದು, ಪ್ಲಾಸ್ಟಿಕ್ ಡಬ್ಬಿಯೊಳಗೆ ಹಾಕುವಾಗ ಕಚ್ಚಿದೆ. ಹಾವನ್ನು ವೈದ್ಯರು ನೋಡಿದರೆ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ಹಾವಿನ ಸಮೇತ ಕಿಮ್ಸ್ ಬಂದಿದ್ದಾರೆ.
ಹೌಹಾರಿದ ಸಿಬ್ಬಂದಿ: ಡಬ್ಬಿಯಲ್ಲಿ ಹಾವು ತಂದಿರುವುದನ್ನು ನೋಡಿ ಕಿಮ್ಸ್ ವೈದ್ಯರು, ಸಿಬ್ಬಂದಿ ಗಾಬರಿಯಾಗಿದ್ದರು. ಹಾವಿನ ಡಬ್ಬಿ ದೂರವಿರಿಸಿ, ವಿಶ್ವನಾಥಗೆ ಚಿಕಿತ್ಸೆ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
‘ಈಗಾಗಲೇ ನೂರಾರು ಹಾವುಗಳನ್ನು ಹಿಡಿದಿದ್ದೇನೆ. ಬುಧವಾರ ಡಬ್ಬಿಗೆ ಹಾಕುವಾಗ ಹಾವು ಕಚ್ಚಿದೆ’ ಎಂದು ವಿಶ್ವನಾಥ ತಿಳಿಸಿದರು. ವಿಶ್ವನಾಥ ಸ್ನೇಹಿತರು ನಂತರ ಹಾವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.