ನವಲಗುಂದ: ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅವಶ್ಯಕವಾದ ಸೌಲಭ್ಯ ಒದಗಿಸಲು ಸಿದ್ಧರಿದ್ದು, ವಿದ್ಯಾರ್ಥಿಗಳು ಅದನ್ನು ತಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಅವರು ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವಲಗುಂದ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ನಡೆದ ವಿವಿ 2ನೇ ವಲಯಮಟ್ಟದ ಪುರುಷರ ಕಬಡ್ಡಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಾ.ಸೋಮಶೇಖರ ಪಟ್ಟಣಶೆಟ್ಟಿ ಮಾತನಾಡಿ, ಕ್ರೀಡಾಪಟುಗಳು ಯಾವುದೇ ದ್ವೇಷ, ಅಸೂಯೆಯಂತಹ ಭಾವನೆ ಇಟ್ಟುಕೊಳ್ಳದೇ ತಾವು ಬೆಳೆಯುತ್ತಾ, ಇತರರನ್ನು ಬೆಳೆಸುತ್ತಾ ಮಾದರಿಯಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ.ಬಿ.ಬಾಗಡಿ ಮಾತನಾಡಿ, ಕರ್ನಾಟಕ ವಿವಿ 2ನೇ ವಲಯ ಮಟ್ಟದ ಕಬ್ಬಡಿ ಟೂರ್ನಿ ಆತಿಥ್ಯವನ್ನು ನಮ್ಮ ಕಾಲೇಜು ವಹಿಸಿರುವುದು ಹೆಮ್ಮೆಯ ಸಂಗತಿ. ಎಲ್ಲ ತಂಡಗಳು ಅತ್ಯಂತ ಕ್ರಿಯಾಶೀಲವಾಗಿ ಸ್ಪರ್ಧೆಯಲ್ಲಿ ತೊಡಗಿ ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 16 ಕಾಲೇಜುಗಳು ಸ್ಪರ್ಧಿಸಿದ್ದು ಎಸ್.ಕೆ.ವಿ.ಪಿ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು ಪ್ರಥಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನರೇಗಲ್ ದ್ವಿತೀಯ ಸ್ಥಾನ ಪಡೆದರು.
ಡಾ.ಐ.ಎಂ.ಮಕ್ಕುಬಾಯಿ, ಎಂ.ಎಂ.ಲಷ್ಕರ್, ಸಂತೋಷ್.ಎನ್.ಹುಬ್ಬಳ್ಳಿ, ವಿನಾಯಕ ಮಿರಜಕರ, ಡಾ.ಸುಗುಣ ಡಿ.ವಿ ಮುಂತಾದವರು ಇದ್ದರು.
ಫೋಟೋ ಶೀರ್ಷಿಕೆ : ನವಲಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುವ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.