ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆತಂಕ | ಹೊಸ ವರ್ಷಕ್ಕೆ ನೂತನ ಮಾರ್ಗಸೂಚಿ ಪ್ರಕಟ: ಬಸವರಾಜ ಬೊಮ್ಮಾಯಿ

Last Updated 24 ಡಿಸೆಂಬರ್ 2022, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ‌ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿ ಹೊರಡಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ‌ ಮಾತನಾಡಿದ ಅವರು, 'ಭಾನುವಾರ ಕಂದಾಯ‌ ಸಚಿವ ಆರ್. ಅಶೋಕ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಸಭೆ ನಡೆಸಿ, ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು‌ ಪ್ರಕಟಿಸಲಿದ್ದಾರೆ' ಎಂದರು.

'ಬೂಸ್ಟರ್ ಡೋಸ್‌ ಹೆಚ್ಚಿಗೆ ನೀಡಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಶಿಬಿರ ಏರ್ಪಡಿಸಬೇಕು. ಆರೋಗ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಔಷಧಿಗಳು ಹಾಗೂ ವ್ಯಾಕ್ಸಿನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿರುವ ಆಮ್ಲಜನಕದ ಪ್ಲಾಂಟ್'ಗಳು ತುರ್ತು ಸಂದರ್ಭದಲ್ಲಿ‌ ಸಮರ್ಪಕವಾಗಿ‌ ಕಾರ್ಯನಿರ್ವಹಿಸುವಂತೆ, ಅವುಗಳನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಡಲು ತಿಳಿಸಲಾಗಿದೆ' ಎಂದು ಹೇಳಿದರು.

'ಒಳಾಂಗಣದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಬಳಸಿ ಅಂತರ‌ ಕಾಯ್ದುಕೊಳ್ಳಬೇಕು‌. ಗಾಬರಿಯಾಗುವ ಅಗತ್ಯವಿಲ್ಲ, ಜಾಗೃತೆ ಮತ್ತು ಎಚ್ಚರಿಕೆಯಿಂದ ಇರುವುದು ಅಗತ್ಯ. ಎಲ್ಲರೂ ಒಗ್ಗಟ್ಟಾಗಿ ಕೋವಿಡ್ ಎದುರಿಸಬೇಕಾಗಿದೆ' ಎಂದರು.

'ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ‌ ಚರ್ಚಿಸಲು ಎರಡು ಅಥವಾ ಮೂರು‌ ದಿನಗಳ ಅವಕಾಶ ನೀಡಬೇಕೆಂದು ನಾನೇ ಸಭಾಧ್ಯಕ್ಷರಲ್ಲಿ ವಿನಂತಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಾಳೆಯಿಂದ‌ ಅವಕಾಶ ನೀಡಬಹುದು' ಎಂದು ಸಿಎಂ ತಿಳಿಸಿದರು.

ಕಾಂಗ್ರೆಸ್'ನಲ್ಲಿ ಒಳಜಗಳ:'ಅವಧಿಪೂರ್ವ ಚುನಾವಣೆ‌ ನಡೆಸುವ ಯಾವ ಯೋಚನೆಯೂ ನಮ್ಮಲ್ಲಿಲ್ಲ‌. ನಮ್ಮ‌ ಪಕ್ಷದ‌ ಯೋಜನೆಗಳನ್ನು ಜನರಿಗೆ ತಲುಪಿಸಿ, ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದೇವೆ. ಚುನಾವಣೆಗೆ ಮತ್ತಷ್ಟು ಸಮಯ ಇರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಒಳಜಗಳಗಳು ಹೆಚ್ಚಾಗುತ್ತಿವೆ. ಇದರಿಂದ ಅವರಿಗೆ ಅಭದ್ರತೆ ಕಾಡುತ್ತಿದೆ.‌ ಅದಕ್ಕಾಗಿ ಕಾರ್ಯಕರ್ತರಿಗೆ ಅವಧಿಪೂರ್ವ ಚುನಾವಣೆ ನಡೆಯುತ್ತದೆ ಎಂದು ಸಂದೇಶ ನೀಡುತ್ತಿದ್ದಾರೆ' ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT