ಲಿಂಗಸುಗೂರು: ತಾಲ್ಲೂಕಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ರೈತರ ಮೇವಿನ ಮತ್ತು ಹೊಟ್ಟಿನ 18 ಬಣವೆಗಳು ಸೋಮವಾರ ಬೆಂಕಿಗೆ ಆಹುತಿಯಾಗಿವೆ.
ರೈತ ಗೌಡಪ್ಪ ಕುಪ್ಪಣ್ಣ, ಅಮರೇಶ ಬಸಲಿಂಗಪ್ಪ, ಆದಪ್ಪ ಬಸಪ್ಪ, ನಾಗಪ್ಪ ಅಮರಪ್ಪ, ಅಮರೇಶ ದೊಡ್ಡಪ್ಪ, ಮಲ್ಲಯ್ಯ ಕುಪ್ಪಣ್ಣ, ಶರಣಮ್ಮ ಶರಣಪ್ಪ, ಬಸಪ್ಪ ಅಡಿವೆಪ್ಪ, ಶರಣಪ್ಪ ಶಿವಪ್ಪ ಎಂಬುವವರಿಗೆ ಈ ಬಣವೆಗಳು ಮತ್ತು ಕೃಷಿಪರಿಕರ ಸಾಮಗ್ರಿಗಳು ಸೇರಿವೆ ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯರಾತ್ರಿ 2ಗಂಟೆಯಿಂದ ಮಂಗಳವಾರ ಮಧ್ಯಾಹ್ನ 12 ಗಂಟೆ ವರೆಗೆ ನಿರಂತರ 10ತಾಸುಗಳ ಕಾಲ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.
ರೈತ ಸಂಘದ ಮುಖಂಡರಾದ ಸಿದ್ದಲಿಂಗೇಶ್ವರಗೌಡ ಪಾಟೀಲ, ಲಿಂಗನಗೌಡ ಮಾತನಾಡಿ, ರೈತರು ಸಂಕಷ್ಟಕ್ಕೆ ಸಿಲುಕಿದರು ತಾಲ್ಲೂಕು ಆಡಳಿತ ಸೌಜನ್ಯತೆಗೂ ಭೇಟಿ ನೀಡಿಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.