ಧಾರವಾಡ: ಮಕ್ಕಳಲ್ಲಿ ಸಾಮಾಜಿಕ ಬದಲಾವಣೆ ಮತ್ತು ಕಾನೂನು ಅರಿವು ಮೂಡಿಸುವುದರ ಜತೆಗೆ ಪ್ರತಿ ಮನೆಯಲ್ಲೂ ಇಲಾಖೆ ರಾಯಭಾರಿಯನ್ನು ಸೃಷ್ಟಿಸುವ ‘ತೆರೆದ ಮನೆ’ ಕಾರ್ಯಕ್ರಮ ಜಿಲ್ಲೆಯ 11 ಠಾಣೆಗಳಲ್ಲಿ ಆರಂಭಗೊಂಡಿದೆ.
ಸರ್ಕಾರಿ ಶಾಲೆ ಮಕ್ಕಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ, ಸಿಬ್ಬಂದಿ ನಿರ್ವಹಿ
ಸುವ ಕರ್ತವ್ಯ, ಕಾನೂನಿನ ಜ್ಞಾನ, ಸಹಭಾಗಿತ್ವದ ಮೂಲಕ ಸಮಾಜದಲ್ಲಿ ತರಬಹುದಾದ ಹೊಸ ಬದಲಾವಣೆ, ನಾಗರಿಕರಾಗಿ ಪೊಲೀಸರಿಗೆ ನೀಡಬಹುದಾದ ಸಹಕಾರ ಹೀಗೆ ಹಲವು ಅಂಶಗಳನ್ನು ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿ ಹೇಳಿಕೊಡುತ್ತಿದ್ದಾರೆ.
ಪ್ರತಿ ಗುರುವಾರ ಜಿಲ್ಲೆಯ ಎಲ್ಲಾ ಠಾಣೆಗಳಲ್ಲೂ ನಡೆಯುತ್ತಿರುವ ‘ತೆರೆದ ಮನೆ’ ಕಾರ್ಯ
ಕ್ರಮದ ಮೂಲಕ, ಪೊಲೀಸ್ ಇಲಾಖೆ ಕುರಿತು ವಿದ್ಯಾರ್ಥಿಗಳ ಹಲವು ತಪ್ಪು ಕಲ್ಪನೆ
ಗಳು ದೂರವಾಗಿವೆ. ಜತೆಗೆ ತೊಂದರೆಗೆ ಸಿಲುಕಿಕೊಂಡಾಗ ಯಾವುದೇ ಭಯವಿಲ್ಲದೆ ಪೊಲೀಸರನ್ನು ಸಂಪರ್ಕಿಸಬಹುದು ಎಂಬ ಭಾವನೆ ಮೂಡಿದೆ ಎಂದು ಶಿಕ್ಷಕರು ಹೇಳುತ್ತಾರೆ.
ಪ್ರತಿ ಗುರುವಾರ ತಮ್ಮ ವ್ಯಾಪ್ತಿಯ ಠಾಣೆಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿ ತಮ್ಮ ಪರಿಚಯದೊಂದಿಗೆ ತಾವು ಠಾಣೆಯಲ್ಲಿ ನಿರ್ವಹಿಸುವ ಕೆಲಸವನ್ನು ವಿವರಿಸುತ್ತಾರೆ. ನಂತರ ಠಾಣೆಯಲ್ಲಿ ಠಾಣಾಧಿಕಾರಿ ಕೊಠಡಿಯಿಂದ ಹಿಡಿದು ಆರೋಪಿಯನ್ನು ಬಂಧಿಸುವ ವರೆಗೆ ಎಲ್ಲಾ ಮಾಹಿತಿಯನ್ನೂ ವಿವರಿಸುತ್ತಾರೆ. ನಂತರ ಅಲ್ಲಿರುವ ಮಹಿಳಾ ಸಿಬ್ಬಂದಿಯಿಂದ ಬಾಲಕಿಯರು ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶದ ಕುರಿತ ಮಾಹಿತಿ ಮತ್ತು ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳ ಮಾಹಿತಿ ಪಡೆಯುತ್ತಿದ್ದಾರೆ.
ಕೌಟುಂಬಿಕ ಕಲಹ ವಿಕೋಪಕ್ಕೆ ಹೋದಾಗ ಹೇಗೆ ಠಾಣೆಗೆ ಮಾಹಿತಿ ನೀಡಬೇಕು. ಯಾರಿಂದಲಾದರೂ ಕಿರುಕುಳ ಎದುರಾದಾಗ ಹೇಗೆ ವರ್ತಿಸಬೇಕು. ಕಾನೂನಿನ ಅರಿವು ಮತ್ತು ನೆರವು ಹೇಗೆ ಪಡೆಯಬೇಕು, ಟ್ರಾಫಿಕ್ ಸಿಗ್ನಲ್ ದೀಪಗಳ ಕುರಿತು ಠಾಣಾಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ನವಲಗುಂದ ತಾಲ್ಲೂಕಿನ ನಾಗಲಿಂಗೇಶ್ವರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿನಾಯಕ ಮಳಲಿ, ‘ಜೀವನದಲ್ಲಿ ಮೊದಲ ಬಾರಿಗೆ ಠಾಣೆ ಮೆಟ್ಟಿಲೇರಿದ್ದ ನನಗೆ,ಅಲ್ಲಿ ಕೂರಿಸಿ ಚಹಾ ಕೊಡುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಲಾಕಪ್ ನೋಡಿದೆ. ಕಾನೂನು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಹೇಗಿರಬೇಕು ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಕೊಟ್ಟರು. ಇದರಿಂದ ಇಲಾಖೆ ಮೇಲಿನ ಭಯ ಈಗ ಇಲ್ಲ’ ಎಂದರು.
‘ತೆರೆದ ಮನೆಗೆ ಭೇಟಿ ನೀಡಿದ ನಂತರ ವಿದ್ಯಾರ್ಥಿಗಳಲ್ಲಿವಿಧೇಯತೆ ಹೆಚ್ಚಾಗಿದೆ. ಕಾನೂನು ಕುರಿತು ಒಂದು ಸಣ್ಣ ಅರಿವು ಮೂಡಿದೆ. ಪೊಲೀಸ್ ಎಂಬ ಹೆದರಿಕೆ ಕಡಿಮೆಯಾಗಿ, ಅಗತ್ಯ ಬಿದ್ದರೆ ಪೊಲೀಸರನ್ನು ಸಂಪರ್ಕಿಸುವ ಧೈರ್ಯ ಅವರಲ್ಲಿ ಮೂಡಿದೆ. ಠಾಣೆಗೆ ಭೇಟಿ ನೀಡಿದ ಬಂದ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಇತರ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಅನುಭವವನ್ನು ಹಂಚಿಕೊಂಡರು’ ಎಂದುಕಲಘಟಗಿಯ ಜನತಾ ಇಂಗ್ಲಿಷ್ ಶಾಲೆಯಮುಖ್ಯಶಿಕ್ಷಕ ಶ್ರೀಧರ ಪಾಟೀಲ ಕುಲಕರ್ಣಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.