ಧಾರವಾಡ: ‘ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಸಿದ್ಧಗೊಳಿಸಿರುವ ಚುನಾವಣಾ ಸಂಬಂಧಿತ ಮೂಲಸೌಕರ್ಯ ಹಾಗೂ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು, ಯಶಸ್ವಿಯಾಗಿ ಚುನಾವಣೆ ಜರುಗಿಸುವಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರವು ಮುಖ್ಯವಾಗಿದೆ. ಸ್ಪಷ್ಟ ಮತ್ತು ಸಂಪೂರ್ಣ ತರಬೇತಿ ಹೊಂದುವುದು ಅಗತ್ಯವಾಗಿದೆ’ ಎಂದು ಚುನಾವಣಾ ಸಾಮಾನ್ಯ ವೀಕ್ಷಕ ಭಾನುಪ್ರಕಾಶ ಯೆಟೂರು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ಸೆಕ್ಟರ್ ಅಧಿಕಾರಿಗಳು ಹಾಗೂ ವಿಧಾನ ಸಭಾ ಕ್ಷೇತ್ರ ಮಟ್ಟದ ತರಬೇತಿದಾರರ ಎರಡನೇಯ ಹಂತದ ತರಬೇತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸೆಕ್ಟರ್ ಅಧಿಕಾರಿಗಳಿಗೆ ಮತಗಟ್ಟೆ ವ್ಯಾಪ್ತಿ ಸೇರಿದಂತೆ, ಸಿಬ್ಬಂದಿ, ಮತಗಟ್ಟೆಯಲ್ಲಿನ ಮೂಲಸೌಕರ್ಯ ಹಾಗೂ ಚುನಾವಣಾ ರೀತಿ, ವಿಧಿ ವಿಧಾನಗಳು, ಭರ್ತಿ ಮಾಡಬೇಕಾದ ಎಲ್ಲ ಅರ್ಜಿ ನಮೂನೆಗಳ ಕುರಿತು ನಿಖರ ಮಾಹಿತಿ ಇರಬೇಕು. ಯಾವುದೇ ಗೊಂದಲಗಳು ಇದ್ದರೆ ತರಬೇತಿಯಲ್ಲಿ ಪರಿಹರಿಸಿಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ‘ಸೆಕ್ಟರ್ ಅಧಿಕಾರಿಗಳು ಇ.ವಿ.ಎಂ., ವಿ.ವಿ. ಪ್ಯಾಟ್ ಸೇರಿದಂತೆ ಎಲ್ಲ ಸಾಮಾನ್ಯ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಯಾವುದೇ ರೀತಿಯ ಸಂಶಯಗಳಿದ್ದರೆ ತರಬೇತಿ ಅವಧಿಯಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು. ಒಟ್ಟಾರೆಯಾಗಿ ಮತಗಟ್ಟೆಯ ಎಲ್ಲ ಸಿಬ್ಬಂದಿಗೆ ಸೆಕ್ಟರ್ ಅಧಿಕಾರಿಯು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಹಿಂದಿನ ತರಬೇತಿಯಲ್ಲಿ ವಿಷಯಗಳನ್ನು ಸೆಕ್ಟರ್ ಅಧಿಕಾರಗಳಿಗೆ ಕೇಳುವ ಮೂಲಕ ಪುನರ್ಮನನ ಮಾಡಿದರು.
ರಾಜ್ಯ ಮಟ್ಟದ ತರಬೇತಿದಾರರಾದ ಬೆಳಗಾವಿಯ ಎನ್.ಎಂ.ಶಿರಗಾಂವಕರ ಅವರು ಸವಿವರವಾದ ಪರಿಣಾಮಕಾರಿ ತರಬೇತಿ ನೀಡಿದರು.
ಜಿಲ್ಲೆಯ ಎಲ್ಲ ಸೆಕ್ಟರ್ ಅಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ತರಬೇತಿದಾರರು ಭಾಗವಹಿಸಿದ್ದರು.