ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ: ಸ್ವ ಎಂದರೆ ನಮ್ಮಿಂದಲೇ ಪ್ರಾರಂಭವಾಗಬೇಕಾದ್ದು ಎಂದರ್ಥ. ಇದು ಸ್ವಚ್ಛತೆಯ ಶಪಥದಲ್ಲೂ ಅಡಗಿದೆ. ಸ್ವಚ್ಛತಾ ಕಾರ್ಯ ಯಶಸ್ಸಿಯಾಗಲು ನಾವೆಲ್ಲರೂ ಶ್ರಮಿಸಬೇಕು ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ ಹೇಳಿದರು.
ನಗರದ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಸ್ವಚ್ಛತಾ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಭಾರತ ಸರ್ಕಾರ ಪ್ರಾರಂಭಿಸಿರುವ ಪಕ್ವಾಡ್ದಲ್ಲಿ ಎಲ್ಲರೂ ತೊಡಗಿಕೊಂಡು ಸ್ವಚ್ಛತಾ ಕಾರ್ಯ ಆಂದೋಲನವಾಗಿ ರೂಪುಗೊಳ್ಳವಂತೆ ಮಾಡಬೇಕು’ ಎಂದರು. ನೈರುತ್ಯ ರೈಲ್ವೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮ ಆಯೋಜಿಸಿತ್ತು.
‘ಭಾರತೀಯ ರೈಲ್ವೆಯಲ್ಲಿ ಒಂದು ದಶಕದ ಹಿಂದೆ ಜೈವಿಕ ಶೌಚಾಲಯಗಳು, ಸ್ವಯಂಚಾಲಿತ ಯಂತ್ರಗಳಿಂದ ಕಸ ಗುಡಿಸುವಿಕೆ, ನೆಲ ಒರೆಸುವಿಕೆ, ತ್ಯಾಜ್ಯ ಸಂಗ್ರಹಣೆ ಹಾಗೂ ವಿಂಗಡಣೆ ವ್ಯವಸ್ಥೆ ಜಾರಿಗೆ ಬಂದಿದೆ. ಇದರ ಫಲವಾಗಿ ದೇಶದಾದ್ಯಂತ ಈಗ ರೈಲ್ವೆ ನಿಲ್ದಾಣಗಳು ಸ್ವಚ್ಚ ಹಾಗೂ ಶುಭ್ರವಾಗಿವೆ. ಈ ನಿಟ್ಟಿನಲ್ಲಿ ಸಾಗಬೇಕಾದ ದಾರಿ ಇನ್ನೂ ದೂರವಿದೆ’ ಎಂದರು.
ಪಕ್ವಾಡ್ ಅಂಗವಾಗಿ ಸೆ.17ರಿಂದ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅ. 2ರ ತನಕ ಜರುಗಲಿವೆ. ಸಂಜೀವ್ ಕಿಶೋರ ನಿಲ್ದಾಣದ ಸುತ್ತ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಟ್ಟೆಯ ಕೈ ಚೀಲಗಳನ್ನು ಕೊಟ್ಟು ಪ್ಲಾಸ್ಟಿಕ್ ಬಳಕೆ ಕೈಬಿಡುವಂತೆ ತಿಳಿಸಿದರು.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡೆ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.