ಹುಬ್ಬಳ್ಳಿ:ಬೆಂಗಳೂರಿನಲ್ಲಿ ಫೆ. 14ರಂದು ನಡೆಯಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಪ್ರತಿನಿಧಿಗಳ ರಾಜ್ಯಮಟ್ಟದ ಸಮ್ಮೇಳನದಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವೈ. ಸೊರಟಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಡ್ತಿ ಪ್ರಮಾಣವನ್ನು ಶೇ 25ರ ಬದಲು ಶೇ 75ಕ್ಕೆ ನಿಗದಿ ಮಾಡಬೇಕು. ವಿಜ್ಞಾನ ವಿಷಯಕ್ಕೆ ಬಿಎಸ್ಸಿ (ಸಿಬಿಝಡ್) ಮತ್ತು ಸಮಾಜ ವಿಜ್ಞಾನಕ್ಕೆ ಬಿ.ಎ. ಸಮಾಜಶಾಸ್ತ್ರ ವಿಷಯಗಳನ್ನೂ ಪರಿಗಣಿಸಬೇಕು. 200 ವಿದ್ಯಾರ್ಥಿಗಳಿಗಿಂತ ಹೆಚ್ಚು ದಾಖಲಾತಿ ಹೊಂದಿರುವ ಶಾಲೆಗಳ ಪದವೀಧರರ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬಡ್ತಿ ಕೊಡಬೇಕು’ ಎಂದರು.
ಸಮ್ಮೇಳನದಲ್ಲಿ ಬೈಲಹೊಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪುರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ (6ರಿಂದ 8ನೇ ತರಗತಿ) ಗುಣಾತ್ಮಕ ಶಿಕ್ಷಣ ವಿಷಯದ ಕುರಿತು ಗೋಷ್ಠಿ ಜರುಗಲಿದೆ. ಎಲ್ಲ ಜಿಲ್ಲೆಗಳ ಸಂಚಾಲಕರು ಹಾಗೂ ಜಿಲ್ಲಾಧ್ಯಕ್ಷರು ಭಾಗವಹಿಸಲಿದ್ದಾರೆ.
‘ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಚುನಾಯಿತ ಪ್ರತಿನಿಧಿಗಳು ಎದುರು ನಮ್ಮ ಬೇಡಿಕೆಗಳನ್ನು ಇಡುತ್ತೇವೆ‘ ಎಂದರು.
ಸಂಘದ ಕೋಶಾಧ್ಯಕ್ಷ ಎಸ್.ಸಿ. ಶಾನವಾಡ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಿದ್ಧಲಿಂಗೇಶ ಹಂಡಗಿ, ಕಾರ್ಯದರ್ಶಿ ಡಾ. ದೋಟಿಹಾಳ್ಇದ್ದರು.