ಹುಬ್ಬಳ್ಳಿ: ನಗರದ ಕೆಲವು ಬಡಾವಣೆಗಳಲ್ಲಿ ಶನಿವಾರ ಸಾರ್ವಜನಿಕರು ಹೋಳಿ ಆಡಿ ಸಂಭ್ರಮಿಸಿದರು. ಚಿಣ್ಣರು ಹಲಗೆ ಬಾರಿಸುತ್ತ ಬಣ್ಣ ಎರಚಿ ಸಂಭ್ರಮಿಸಿದರೆ, ಯುವಕರು ಓಣೆ ತುಂಬಾ ಸಂಚರಿಸಿ ಪರಿಚಯದವರಿಗೆ ಬಣ್ಣ ಎರಚಿ ಖುಷಿಪಟ್ಟರು.
ವಿದ್ಯಾನಗರ, ಕೇಶ್ವಾಪುರ, ಗೋಕುಲ ರಸ್ತೆ, ಬೈರಿದೇವರಕೊಪ್ಪ, ನವನಗರ ಭಾಗಗಳಲ್ಲಿ ರಂಗಿನ ಹಬ್ಬ ಜೋರಾಗಿತ್ತು. ಹಳೇ ಹುಬ್ಬಳ್ಳಿ ಘೋಡಕೆ ಓಣಿ ಹಾಗೂ ನವಅಯೋಧ್ಯಾನಗರದಲ್ಲಿ ಹಿಂದೂ–ಮುಸ್ಲಿಂ ಯುವಕರು ಪರಸ್ಪರ ಬಣ್ಣ ಎರಚಿ ಸೌಹಾರ್ದ ಮೆರೆದರು.
‘ಬಹಳ ವರ್ಷಗಳಿಂದ ಹಿಂದೂ–ಮುಸ್ಲಿಮರು ಒಟ್ಟಾಗಿ ಬಣ್ಣದ ಹಬ್ಬ ಆಚರಿಸುತ್ತಿದ್ದಾರೆ. ನಾವು ಯಾವುದೇ ಹಬ್ಬವನ್ನಾದರೂ ಜತೆಯಾಗಿಯೇ ಆಚರಿಸುತ್ತಿದ್ದೇವೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಡೋರ್ ಕಕ್ಕಯ್ಯ ಸಮಾಜದ ಅಧ್ಯಕ್ಷ ಜಗನ್ನಾತ ಸೋಣಾವಣೆ ಪ್ರತಿಕ್ರಿಯಿಸಿದರು.