ಹುಬ್ಬಳ್ಳಿ: ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಮೃತಪಟ್ಟ ಸಿಬ್ಬಂದಿಯೊಬ್ಬರ ಗ್ರಾಚ್ಯುಯಿಟಿ ಹಾಗೂ ವೇತನ ಬಿಡುಗಡೆಗಾಗಿ, ಲಂಚ ಪಡೆಯುತ್ತಿದ್ದ ವಲಯ ಅರಣ್ಯ ಅಧಿಕಾರಿ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಎಸಿಬಿ ವಶಕ್ಕೆ ಪಡೆದಿದೆ.
ಹೊರಗುತ್ತಿಗೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ ಕುಲಕರ್ಣಿ ಮತ್ತು ದ್ವಿತೀಯ ದರ್ಜೆ ಸಹಾಯಕ ಅನ್ನದಾನಯ್ಯ ನೀಲಗುಂದಮಠ ಲಂಚದ ಸಮೇತ ಸಿಕ್ಕಿಬಿದ್ದಿದ್ದಾರೆ. ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿದ್ದ ಅಖಳಂಡಪ್ಪ ಚಕ್ರಸಾಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದರು.
ಅವರ ಗ್ರ್ಯಾಚೂಟಿ ₹3,56,424 ಲಕ್ಷ ಹಾಗೂ ಮೂರು ತಿಂಗಳ ಬಾಕಿ ವೇತನ ₹35 ಸಾವಿರ ಬಿಡುಗಡೆಗೆ ₹15 ಸಾವಿರ ಬೇಡಿಕೆ ಇಟ್ಟಿದ್ದರು.ಈ ಕುರಿತು ಅಖಳಂಡಪ್ಪ ಅವರ ಪುತ್ರ ಈಶ್ವರಪ್ಪ ಚಕ್ರಸಾಲಿ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ವಿ.ಎನ್. ಕಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.