ಧಾರವಾಡ: ‘ಸಹಕಾರ ಸಂಸ್ಥೆಗಳು ಬರೀ ಲಾಭಕ್ಕೆ ಸೀಮಿತಗೊಳ್ಳದೇ ಸಂಕಷ್ಟದಲ್ಲಿ ಇರುವ ಜನರಿಗೂ ನೆರವಾಗಬೇಕು’ ಎಂದು ಹಿರಿಯ ಲೆಕ್ಕಪರಿಶೋಧಕ ಪಿ.ಎಂ.ಮುದಿಗೌಡರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ ದೇಶಪಾಂಡೆ ಸಭಾಂಗಣದಲ್ಲಿ ಈಚೆಗೆ ವಿರೂಪಾಕ್ಷಪ್ಪ ಶಿವಯೋಗೆಪ್ಪ ಬಸವನಾಳ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಹಣಕಾಸು ವ್ಯವಸ್ಥೆಯಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ’ ಕುರಿತು ಮಾತನಾಡಿದರು.
ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯವೇ ಸಹಕಾರ. ಸದಸ್ಯರಿಂದ, ಸದಸ್ಯರಿಗಾಗಿ, ಸದಸ್ಯರಿಂದಲೇ ನಡೆಸಲ್ಪಡುವ ಸಂಸ್ಥೆ ಸಹಕಾರ ಸಂಘ. ಸಣ್ಣರೈತರನ್ನು,ಉದ್ದಿಮೆದಾರರನ್ನು ಬೆಳೆಸಿದ್ದು ಸಹಕಾರಿ ಸಂಸ್ಥೆಗಳು. ನಿಸ್ವಾರ್ಥ ಭಾವದಿಂದಿರುವುದೇ ಸಹಕಾರ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಸ್ವಾರ್ಥದಿಂದ ರಾಜಕಾರಣ ಮಾಡಿದ್ದರೆ ಏನೆಲ್ಲಾ ಗಳಿಸಬಹುದಿತ್ತು. ಆದರೆ ನಾನು ಜನರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಅದರಲ್ಲೇ ನನಗೆ ತೃಪ್ತಿ ಇದೆ ಎಂದರು.
ಕೆಸಿಸಿ ಬ್ಯಾಂಕ್ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಸ್. ಜಿ. ಪಾಟೀಲ ಮಾತನಾಡಿ, ಪ್ರಾಮಾಣಿಕವಾಗಿ ಸಮಾಜದ ದುಡ್ಡನ್ನು ಸಮಾಜಕ್ಕಾಗಿಯೇ ಬಳಸಬೇಕು. ಪಿ.ಎಲ್. ಪಾಟೀಲರು ಮತ್ತು ವಿ.ಎಸ್. ಬಸವನಾಳರು ಶುದ್ಧ ಭಾವನೆಯುಳ್ಳ ನಿಷ್ಠಾವಂತ, ಪ್ರಾಮಾಣಿಕತೆಯ ಪ್ರತೀಕವಾಗಿದ್ದರು’ ಎಂದರು.
ಧಾರವಾಡದ ಗುರುಕುಲ ಕರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ. ಪಾಟೀಲ ಮಾತನಾಡಿ, ‘ಜಾತಿ ಭೇದ, ವರ್ಣ ಭೇದ ಮಾಡದೇ ಜಾತ್ಯಾತೀತವಾಗಿ ಸರ್ವರನ್ನೂ ಸಮಾನ ದೃಷ್ಟಿಯಿಂದ ಕಾಣುವಂಥದ್ದು ಸಹಕಾರ ಸಂಘ. ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಒಳಗೊಂಡು ಕಾರ್ಯಮಾಡಿದಲ್ಲಿ ಸಹಕಾರ ಸಂಘಗಳು ಉತ್ತುಂಗಕಾಣಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮೃತ್ಯುಂಜಯ ಶೆಟ್ಟರ, ರವೀಂದ್ರ ಬಸವನಾಳ, ವೀರಣ್ಣಒಡ್ಡೀನ,ಮಹೇಶ ಹೊರಕೇರಿ, ರಾಜೇಂದ್ರ ಸಾವಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.