ಹುಬ್ಬಳ್ಳಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ವಕೀಲರ ಮೇಲಾದ ಪೊಲೀಸ್ ದೌರ್ಜನ್ಯ ಖಂಡಿಸಿ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ವಿದ್ಯಾನಗರದಲ್ಲಿ ಹುಬ್ಬಳ್ಳಿ–ಧಾರವಾಡ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಮಾತನಾಡಿ, ವಕೀಲರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಮಧ್ಯಾಹ್ನ 12ರಿಂದ ಅರ್ಧ ಗಂಟೆ ಕಾಲ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ದೆಹಲಿ ಪೊಲೀಸ್ ವಿರುದ್ಧ ವಕೀಲರು ಘೋಷಣೆ ಕೂಗಿದರು. ಹುಬ್ಬಳ್ಳಿ ಮತ್ತು ಧಾರವಾಡದ ಕಡೆ ಸಂಚರಿಸುವ ವಾಹನಗಳು ನಿಂತಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.
ಸಂಘದ ಕಾರ್ಯದರ್ಶಿ ಗುರು ಎಫ್. ಹಿರೇಮಠ, ಉಪಾಧ್ಯಕ್ಷ ಎಸ್.ವಿ. ಕೊಪ್ಪರ, ಜಯರಾಜ ಪಾಟೀಲ, ವಿಠ್ಠಲ ಸೋಮನಕೊಪ್ಪ, ಸುಮಿತ್ ಶೆಟ್ಟರ್, ಅಶೋಕ ಅಣ್ವೇಕರ್, ಶೋಭಾ ಪವಾರ್, ಸವಿತಾ ಹಾನಗಲ್ಲ, ವೆಂಕಟೇಶ ಮಲ್ಯಾರಿ ಇದ್ದರು.