ಹುಬ್ಬಳ್ಳಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್ಯು) ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಧಕ್ಕೆ ಉಂಟುಮಾಡಿ, ಆಕ್ಷೇಪಾರ್ಹ ಬರಹಗಳನ್ನು ಬರೆದಿರುವುದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಇಲ್ಲಿನ ಮಿನಿವಿಧಾನಸೌಧದ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಭಾರತದ ಭವ್ಯ ಪರಂಪರೆಯನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಘನತೆಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಜೆಎನ್ಯು ಸದಾ ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ ಎನ್ನುವ ಸ್ವಾಮಿ ವಿವೇಕಾನಂದರ ಮಾತು ಈ ವಿಶ್ವವಿದ್ಯಾಲಯ ಸುಳ್ಳಾಗಿಸಿದೆ. ದೇಶ ವಿರೋಧಿ ಚಿಂತನೆಗಳನ್ನು ಹೊಂದಿರುವ ಅಲ್ಲಿಯ ಕೆಲವು ವಿದ್ಯಾರ್ಥಿಗಳ ಗುಂಪು ದುಷ್ಕೃತ್ಯಗಳನ್ನು ಮಾಡುತ್ತಲೇ ಇದ್ದು, ಇದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ವಿವೇಕಾನಂದರ ಪುತ್ಥಳಿಗೆ ಧಕ್ಕೆ ತಂದಿರುವವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅವರನ್ನು ಬಂಧಿಸದಿದ್ದರೆ ರಾಜ್ಯದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿದ್ಯಾರ್ಥಿ ಮುಖಂಡರಾದ ಗಂಗಾಧರ ಹಂಜಗಿ, ರಮೇಶ ಲೋಂಡೆ, ತೇಜಸ್ ಗೋಕಾಕ್, ಮಲ್ಲಿಕಾರ್ಜುನ ರಾಯಪ್ಪಗೌಡರ, ಮಹಾಂತೇಶ, ಸಂತೋಷ, ವಿಜಯಾ ಇದ್ದರು.