ಹುಬ್ಬಳ್ಳಿ: ‘ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಮುಂಬರುವ ಮಹಾನಗರ ಪಾಲಿಕೆ ಹಾಗೂ ವಿಧಾಸಭಾ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುವುದು’ ಎಂದು ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
‘ಹುಬ್ಬಳ್ಳಿ–ಧಾರವಾಡ ಮಹಾನಗರವು ಹಿಂದೊಮ್ಮೆ ಪಕ್ಷದ ಗಟ್ಟಿ ನೆಲೆಯಾಗಿತ್ತು. ಈಗಲೂ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರ ಜತೆಗೆ,ಎಲ್ಲಾ ಸಮುದಾಯಗಳನ್ನು ಒಳಗೊಂಡು ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಮುಖ ಜವಾಬ್ದಾರಿಯನ್ನು ರಾಜ್ಯದ ನಾಯಕರು ನನಗೆ ನೀಡಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹಲವು ಕಾರಣಗಳಿಂದಾಗಿ ಅವಳಿನಗರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದೆಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಾಗುವುದು. ಹಳೆಯ ಮುಖಂಡರನ್ನು ಭೇಟಿ ಮಾಡಿ, ಅವರಿಗೆ ಜವಾಬ್ದಾರಿ ನೀಡಿ ಸಕ್ರಿಯಗೊಳಿಸಲಾಗುವುದು. ತಾಲ್ಲೂಕು, ಬ್ಲಾಕ್ ಹಾಗೂ ವಾರ್ಡ್ ಮಟ್ಟದ ಘಟಕಗಳನ್ನು ರಚಿಸಲಾಗುವುದು’ ಎಂದರು.
‘ಮಹಾನಗರ ಪಾಲಿಕೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಗುರುತಿಸುವಿಕೆಗೆ ಈಗಿನಿಂದಲೇ ಚಾಲನೆ ನೀಡಲಾಗುವುದು. ಪಕ್ಷದವರಷ್ಟೇ ಅಲ್ಲದೆ, ರಾಜಕೀಯೇತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದ ಹೇಳಿದರು.
‘ಬಿಜೆಪಿಯ ಸುಳ್ಳು ಭರವಸೆಗಳಿಂದ ಅವಳಿನಗರದ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದ ಕೋಟ್ಯಂತರ ರೂಪಾಯಿ ಎಲ್ಲಿ ಹೋಯಿತು ಎಂದು ಕೇಳಬೇಕಾಗಿದೆ’ ಎಂದರು.
ಪಕ್ಷದಕಾರ್ಯದರ್ಶಿ ಗಜಾನನ ಅಣವೇಕರ, ಕಾರ್ಯಾಧ್ಯಕ್ಷ ಸಾಧಿಕ್ ಹಕೀಂ, ಖಜಾಂಚಿ ತುಳಸಿಕಾಂತ್ ಕೋಡೆ, ಮುಖಂಡರಾದಪಕ್ಷದ ಡಾ. ಅಬ್ದುಲ್ ಕರೀಂ ಹಾಗೂ ಅಪ್ರೋಜ್ ಇದ್ದರು.