ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದ ಆವರಣದ ಕೆರೆಯ(ತೆಪ್ಪದ ಹೊಂಡ)ಮಧ್ಯಭಾಗದಲ್ಲಿರುವ ದೇವರ ಮಂಟಪಕ್ಕೆ ಪೂಜೆ ಸಲ್ಲಿಸಲು ಈಜಿಕೊಂಡು ಹೋಗುತ್ತಿದ್ದಾಗ ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಜಾಲಿಹಾಳ ಗ್ರಾಮದ ಉಮೇಶಪ್ಪ ಜಾಲಿಹಾಳ (22) ಮೃತರು.
ಮೃತದೇಹವನ್ನು ಕೆರೆಯಿಂದ ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗಾಗಿ ತರಲಾಗಿದೆ. ಉಮೇಶಪ್ಪ, ಜೀವೇಶ್ವರ ಶಿಕ್ಷಣ ಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಪ್ರಥಮ ವರ್ಷ ಓದುತ್ತಿದ್ದರು. 2015ರಿಂದ ಮಠದಲ್ಲಿದ್ದರು.
‘ಕೆರೆಯ ಮಧ್ಯ ಭಾಗದ ಮಂಟಪಕ್ಕೆ ಈಜಿಕೊಂಡು ಹೋಗುವಾಗ ಕೈ ಸೋತು ನಿತ್ರಾಣಗೊಂಡು ಉಮೇಶಪ್ಪ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಂಟಪಕ್ಕೆ ಹೋಗುವಂತೆ ಆತನಿಗೆ ಯಾರೂ ಹೇಳಿರಲಿಲ್ಲ. ಸ್ವ ಇಚ್ಛೆಯಿಂದ ಹೋಗಿದ್ದ’ ಎಂದು ಸಿದ್ಧಾರೂಢಮಠ ಟ್ರಸ್ಟ್ ಸಮಿತಿ ಚೇರ್ಮನ್ ಡಿ.ಡಿ. ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.