ಹುಬ್ಬಳ್ಳಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಕಾಲೇಜು ವಿದ್ಯಾರ್ಥಿನಿಯೊಬ್ಬರ ಬ್ಯಾಂಕ್ ಖಾತೆಯಿಂದ ₹44,550 ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
ಇಲ್ಲಿನ ವಿದ್ಯಾನಗರದ ಪ್ರೇರಣಾ ಕಾಲೇಜಿನ ರೇಷ್ಮಾ ರಾಥೋಡ ವಂಚನೆಗೊಳಗಾದ ವಿದ್ಯಾರ್ಥಿನಿ. ಇವರು ಶೈನ್ ಡಾಟ್ ಕಾಂ ವೆಬ್ಸೈಟ್ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದರು. ಅದನ್ನು ನೋಡಿರುವ ವಂಚಕರು, ಎಚ್ಡಿಐಎಲ್ ಕಂಪನಿಯಲ್ಲಿ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾಗಿರುವುದಾಗಿ ಅವರಿಗೆ ಕರೆ ಮಾಡಿ ನಂಬಿಸಿದ್ದಾರೆ. ಇ–ಮೇಲ್ ಮೂಲಕ ಕಂಪನಿಯ ನೇಮಕಾತಿ ಪತ್ರ ಕಳುಹಿಸಿ, ವಿವಿಧ ಶುಲ್ಕ ಪಾವತಿಸಲು ಡಿಬಿಎಸ್ ಬ್ಯಾಂಕ್ ಖಾತೆ ನೀಡಿದ್ದಾರೆ.
ಇದನ್ನು ನಂಬಿದ ರೇಷ್ಮಾ, ಸಿಂಡಿಕೇಟ್ ಬ್ಯಾಂಕಿನ ತಮ್ಮ ಖಾತೆ ಲಿಂಕ್ ಇರುವ ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ನಂತರ ಅವರ ಕೆಲವು ನಂಬರ್ಗಳಿಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಹಾಗೂ ಕೆಲವು ನಂಬರ್ಗಳು ಕರೆ ಸ್ವೀಕರಿಸಲಿಲ್ಲ. ವಿದ್ಯಾರ್ಥಿನಿಗೆ ತಾನು ಮೋಸ ಹೋಗಿರುವುದಾಗಿ ತಿಳಿದು ಬಂದಿದೆ. ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅತ್ಯಾಚಾರ, ವಿಡಿಯೊ ವೈರಲ್; ದೂರು ದಾಖಲು:
ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪುವ(ಮತ್ತು ಬರುವ) ಔಷಧ ಕುಡಿಸಿ, ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿರುವ ವಿಡಿಯೊ ವೈರಲ್ ಮಾಡಿರುವ ಆರೋಪಿ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ನಿವಾಸಿ, ಗುತ್ತಿಗೆದಾರ ಅನ್ವರಸಾಬ್ ವೆಂಕಟಾಪುರ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ.
ಕಳೆದ ಅಕ್ಟೋಬರ್ 8ರಂದು ಕಾರ್ಮಿಕ ಮಹಿಳೆಯೊಬ್ಬರನ್ನು ಸವಣೂರಿನಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದನು. ಮತ್ತು ಬರುವ ಔಷಧ ಹಾಕಿರುವ ನೀರು ಕುಡಿಸಿ, ವಸತಿ ಗೃಹಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಮುಂದಾದಾಗ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಮತ್ತೆ ಬಲವಂತವಾಗಿ ಮತ್ತು ಬರುವ ಔಷಧ ಕುಡಿಸಿ ಅತ್ಯಾಚಾರ ಎಸಗಿ, ವಿಡಿಯೊ ಚಿತ್ರಿಕರಣ ಮಾಡಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದ. ಇದೀಗ ವಿಡಿಯೊ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.