ಮೈಸೂರು: ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷವು (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ– ಎಂಇಪಿ) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಖ್ ತಿಳಿಸಿದರು. ರಾಜೀವ್ನಗರದಲ್ಲಿ ಗುರುವಾರ ನಡೆದ ಪಕ್ಷದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಜೆಟ್ನಲ್ಲಿ ಸಾವಿರ ಕೋಟಿ ಗಳನ್ನು ವಿವಿಧ ಯೋಜನೆಗಳಿಗೆ ತೊಡಗಿಸ ಲಾಗುತ್ತಿದೆ. ಆದರೆ, ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಜೋಪಡಿಗಳು ಹಾಗೇ ಇವೆ. ಬದಲಾವಣೆ ಎನ್ನುವುದು ಎಲ್ಲೂ ಗೋಚರಿಸುತ್ತಿಲ್ಲ. ಇಂತಹ ವಾತಾವರಣದಲ್ಲಿ ಪಕ್ಷಕ್ಕೆ ಭವಿಷ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯವು ಅಭಿವೃದ್ಧಿ ಪಥದಲ್ಲಿ ರಾಷ್ಟ್ರದಲ್ಲಿಯೇ 5ನೇ ಸ್ಥಾನದಲ್ಲಿದೆ. ಆದರೆ, ಈ ಅಭಿವೃದ್ಧಿ ರಾಜ್ಯದ ಎಲ್ಲ ಭಾಗಕ್ಕೆ ಸಮಾನವಾಗಿ ಹಂಚಿಕೆಯಾಗಿಲ್ಲ. ಪ್ರಾದೇಶಿಕ ಅಸಮಾನತೆ ತೊಡೆದು ಹಾಕುವುದೇ ಪಕ್ಷದ ಉದ್ದೇಶ ಎಂದರು.
ಇದಕ್ಕೂ ಮುನ್ನ ನೌಹೀರಾ ಶೇಖ್ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ವೃತ್ತದಿಂದ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯು ಎಲ್ಐಸಿ ವೃತ್ತ, ಫೌಂಟೇನ್ ವೃತ್ತ, ಸೇಂಟ್ ಫಿಲೋಮಿನಾ ಚರ್ಚ್ ಮೂಲಕ ರಾಜೀವ್ನಗರದ ಅಲ್ಬದರ್ ಮಸೀದಿ ಮೈದಾನಕ್ಕೆ ಬಂದಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಷರೀಫ್, ನಗರ ಘಟಕದ ಅಧ್ಯಕ್ಷೆ ಮಂಗಳಾ ಗೌರಿ, ಮುಖಂಡರಾದ ಸುನೀತಾ, ಮಂಡ್ಯದ ಸಾಯಿಮಂದಿರದ ಧರ್ಮಾಧಿಕಾರಿ ಭಾಸ್ಕರ್ ರಾವ್ ಭಾಗವಹಿಸಿದ್ದರು.
* *
ಯಾವುದೇ ಪಕ್ಷವೂ ಮಹಿಳೆಯರನ್ನು ಗುರುತಿಸಿಲ್ಲ. ಎಂಇಪಿ ಮಹಿಳೆಯರಿಗೆ ಎಲ್ಲ ಅವಕಾಶಗಳನ್ನು ನೀಡಲಿದೆ. – ಷರೀಪ್,
ಎಂಇಪಿ ಜಿಲ್ಲಾ ಘಟಕದ ಅಧ್ಯಕ್ಷ