ಚನ್ನಪಟ್ಟಣ: ಮದ್ಯಪಾನದಿಂದ ಜೀವನ ಹಾಳು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಚಂದ್ರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೊಡ್ಡಮಳೂರಿನ ಸಾಯಿ ಮಂದಿರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲ ದುಡಿಯುವ ವರ್ಗ ಕುಡಿತದ ಚಟ ಕಲಿತು ದುಡಿಯುವ ಹಣವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡು ಕುಟುಂಬವನ್ನು ಬೀದಿಪಾಲು ಮಾಡುತ್ತಿದ್ದಾರೆ. ಅಂತಹವರನ್ನು ಕರೆತಂದು ಕುಡಿತದ ಚಟದಿಂದ ಬಿಡಿಸಲು ಶ್ರಮಿಸುತ್ತಿರುವ ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ ಎಂದರು.
ನಿವೃತ್ತ ಪ್ರಾಂಶುಪಾಲ ಬಿ.ವಿ.ಜಯರಾಮೇಗೌಡ ಮಾತನಾಡಿ, ಇಂಥ ಚಟ ಬಿಡಿಸಲು ಅರಿವು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ಮಾತನಾಡಿ, ಮದ್ಯಪಾನದಿಂದ ಅನೇಕ ತೊಂದರೆಗಳಾಗುತ್ತವೆ ಎಂಬುದರ ಅರಿವು ಇದ್ದರೂ ಮನುಷ್ಯ ಮಾತ್ರ ಚಟ ಬಿಡುತ್ತಿಲ್ಲ. ಈ ಚಟ ಬಿಡಿಸಲು ಆಧುನಿಕ ತಂತ್ರ ಅವಶ್ಯಕ. ಈ ಬಗ್ಗೆ ಸರ್ಕಾರ ಯೋಚಿಸಬೇಕು ಎಂದರು.
ದೊಡ್ಡ ಮಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಯೋಜನೆ ಜಿಲ್ಲಾ ನಿರ್ದೇಶಕ ಬಾಬುನಾಯ್ಕ ಮತ್ತು ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಇದ್ದರು.