ಬಿಡದಿ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಾಗ ಮಾತ್ರ ರೈತ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಬಿಡದಿ ರೈತರ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಂ.ಚಂದ್ರಶೇಖರ್ ಹೇಳಿದರು.
ಇಲ್ಲಿನ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಂಘದ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಯಕ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬ್ಯಾಂಕಿನ ವತಿಯಿಂದ ಉತ್ತಮ ಮಾರ್ಗದರ್ಶನ, ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ಪೂರೈಕೆ ಮಾಡಿ ಪ್ರಗತಿ ಹೊಂದಲು ನೆರವಾಗಬೇಕು ಎಂದರು.
ಸಂಘದ ನಿರ್ದೇಶಕ ಮಲ್ಲೇಶ್ ಮಾತನಾಡಿ 1973ರಲ್ಲಿ ಸಿ.ಬೋರಯ್ಯ ಅವರು ಪ್ರಾರಂಭಿಸಿದ ರೈತರ ಸೇವಾ ಸಹಕಾರ ಬ್ಯಾಂಕ್ ಈ ಭಾಗದಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ರೈತರ ಸಹಕಾರಿಯಾಗಿ ಸಾಲ ವಿತರಣೆ, ರಸಗೊಬ್ಬರ ಪೂರೈಕೆ ಮಾಡಿ ಉತ್ತಮ ವಹಿವಾಟು ನಡೆಸುವ ಮೂಲಕ ರೈತಸ್ನೇಹಿ ಸಹಕಾರ ಬ್ಯಾಂಕ್ ಆಗಿ ಸೇವೆ ಸಲ್ಲಿಸುತ್ತಿದೆ ಎಂದರು.