ರಾಮನಗರ: ಮಂಡಿಪೇಟೆಯಲ್ಲಿರುವ ಸೂರ್ಯ ಸ್ಟೋರ್ಸ್ ಹೆಸರಿನ ಬಣ್ಣ ಮತ್ತು ಹಾರ್ಡ್ವೇರ್ ಅಂಗಡಿಯಲ್ಲಿ ಶುಕ್ರವಾರ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದವು.
ಅಂಗಡಿಯ ಮಾಲೀಕ ಕೆ.ಆರ್. ಸತೀಶ್ ಎಂಬುವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಳಿಗೆಯ ಬಾಗಿಲು ಮುಚ್ಚಿ ಊಟಕ್ಕೆ ತೆರಳಿದ್ದರು. ಅದಾದ ಕೆಲ ಹೊತ್ತಿನಲ್ಲಿಯೇ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹೊರಗೆ ಹೊಗೆ ಬರಲಾರಂಭಿಸಿತು. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು.
ನಗರಸಭೆಯ ವಾಟರ್ ಟ್ಯಾಂಕ್ ಬಳಸಿ ಬೆಂಕಿ ನಂದಿಸಲು ಯತ್ನಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
₹15–20 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟಿರುವುದಾಗಿ ಮಾಲೀಕರು ತಿಳಿಸಿದರು.