ವಿಜಯಪುರ: ತಾಲ್ಲೂಕಿನ ಹೊನಗನಹಳ್ಳಿ ಗ್ರಾಮ ಪಂಚಾಯಿತಿಯಿಂದ ಪ್ರಾರಂಭಿಸಲಾಗಿರುವ ಹೊಸ ಹಿಟ್ಟಿನ ಗಿರಣಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಶನಿವಾರ ಉದ್ಘಾಟಿಸಿದರು.
ಖಾರ ಕುಟ್ಟುವ ಯಂತ್ರ, ಗೋಧಿ ಹಾಗೂ ಜೋಳ ಬೀಸುವ ಯಂತ್ರ, ವಿವಿಧ ರವಾ ಬೀಸುವ ಯಂತ್ರ ಹೀಗೆ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ. ಪಂಚಾಯಿತಿಗೆ ತೆರಿಗೆ ಪಾವತಿಸಿರುವ ನಿವಾಸಿಗಳು ಇದರ ಸೌಲಭ್ಯ ಪಡೆಯಬಹುದಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ಮಾಜಿ ಸೈನಿಕರಿಗೆ ಉಚಿತವಾಗಿ ಬೀಸಿ ಕೊಡಲಾಗುತ್ತದೆ. ಇತರ ಜನಾಂಗದವರಿಗೆ ಸೊಲಗಿಗೆ ₹2 ದರ ನಿಗದಿಪಡಿಸಲಾಗಿದೆ.
ಹೊನಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾಬಾಯಿ ಮಮದಾಪುರ, ಉಪಾಧ್ಯಕ್ಷ ಸಾಬು ಕವಟಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಕಟ್ಟಿ, ಕಾರ್ಯದರ್ಶಿ ಎ.ಎಂ.ನಿಂಬಾಳಕರ ಇದ್ದರು.