ಸೊರಬ: ಮನೆಯ ಕಾರ್ಯಕ್ರಮವೊಂದರಲ್ಲಿ ಊಟ ಸೇವಿಸಿದ 34 ಮಂದಿ ಗುರುವಾರ ಅಸ್ವಸ್ಥರಾಗಿ, ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲ್ಲೂಕಿನ ಜಡೆ ಹೋಬಳಿಯ ಕಲ್ಲುಕೊಪ್ಪ ಗ್ರಾಮದ ಷಣ್ಮುಖಪ್ಪ ಅವರ ಮನೆಯಲ್ಲಿ ಮಂಗಳವಾರ ಸಂಜೆ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬದವರೇ ಸಿದ್ಧಪಡಿಸಿದ ಅಡುಗೆಯನ್ನು 50 ಜನರು ಪ್ರಸಾದ ರೂಪದಲ್ಲಿ ಊಟ ಮಾಡಿದ್ದರು.
ಬುಧವಾರ ಊಟ ಮಾಡಿದವರಿಗೆ ಹೊಟ್ಟೆನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು.
ಆದರೆ ಗುಣಮುಖರಾಗದ ಹಿನ್ನೆಲೆಯಲ್ಲಿ 34 ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿಗಳ ಚಿಕಿತ್ಸೆಗೆಂದು ಹೆಚ್ಚುವರಿ ಇಬ್ಬರು ವೈದ್ಯರನ್ನು ನಿಯೋಜಿಸಿಕೊಳ್ಳಲಾಗಿದೆ ಹಾಗೂ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳ ನೇತೃತ್ವದ ತಂಡವು ಗ್ರಾಮಕ್ಕೆ ಭೀಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದೆ.
‘ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಇಬ್ಬರ ಮಲ ಸಂಗ್ರಹಿಸಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕಾರಣ ಸ್ಪಷ್ಟವಾಗಲಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಹರ್ಷ ಪಾಟೀಲ್ ತಿಳಿಸಿದರು.