ಬೆಂಗಳೂರು:ರಾಜ್ಯದಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ತಡೆಗೆ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ವಿವಿಧ ಧಾರ್ಮಿಕ, ಕಾರ್ಮಿಕ, ದಲಿತ, ಸಾಹಿತ್ಯ, ಮಹಿಳಾ ಸಂಘಟನೆಗಳು ಒಗ್ಗೂಡಿ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ವನ್ನು ಇದೇ 5ರಂದು ಸಂಜೆ 4.30ಕ್ಕೆ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿವೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್, ‘ಸರ್ವ ಸಮುದಾಯಗಳನ್ನು ಪ್ರತಿನಿಧಿಸುವ ಧರ್ಮಗುರುಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕೆಂಬ ಕಳಕಳಿಯ ಸಂದೇಶ ನೀಡಲಿದ್ದಾರೆ’ ಎಂದರು.
‘ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಬೇಕಿದೆ.‘ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವುದು ಬೇಡ’ ಎನ್ನುವುದೇ ಸಮಾವೇಶದ ಪ್ರಧಾನ ಸಂದೇಶ’ ಎಂದು ಹೇಳಿದರು.