ಗದಗ: ಗುತ್ತಿಗೆ ಅವಧಿ ಮುಂದುವರಿಸಲು ಹಾಗೂ ಹೆಚ್ಚಳವಾಗಿರುವ ಗೌರವಧನವನ್ನು ಹಿಂದಿರುಗಿಸುವಂತೆ ಬೇಡಿಕೆ ಇಟ್ಟಿದ್ದ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀಕ್ಷಕ ಶಿವಾನಂದ ಸಿಂದೋಗಿ ಬುಧವಾರ ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಐದು ಮಂದಿ ಡಿ ಗ್ರೂಪ್ ನೌಕರರ ಗೌರವಧನ ಹೆಚ್ಚಾಗಿತ್ತು. ಗುತ್ತಿಗೆ ಅವಧಿ ಮುಂದುವರಿಸಬೇಕಾದರೆ ಹೆಚ್ಚುವರಿ ಗೌರವಧನವನ್ನು ತನಗೆ ನೀಡಬೇಕು ಎಂದು ಅವರು ನೌಕರರ ಬಳಿ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕ್ರಯ್ಯ ಸಾರಂಗಮಠ ಎಂಬುವರು ಎಸಿಬಿಗೆ ದೂರು ನೀಡಿದ್ದರು. ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್ಒ ಕಚೇರಿಯಲ್ಲಿ ಶಿವಾನಂದ ಸಿಂದೋಗಿ ₹19 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.