ಗದಗ: ಫಲಾನುಭವಿಗೆ ಭೂಮಿ ಮಾರಾಟದ ₹ 12,57,500 ಹಣ ನೀಡಲು ₹ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಲ್ಲಿನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಚ್.ವೈ.ರುದ್ರಾಕ್ಷಿ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
₹ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯ ವಿರುದ್ಧ ಬೆಟಗೇರಿಯ ಮಂಜುನಾಥ್ ಸಜ್ಜನ ಎಸಿಬಿಗೆ ದೂರು ನೀಡಿದ್ದರು.
ಸೋಮವಾರ ಅಧಿಕಾರಿಯು ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಡಿಎಸ್ಪಿವಾಸುದೇವ್ ರಾಮ್ ಎನ್. ನೇತೃತ್ವದಲ್ಲಿ ದಾಳಿ ನಡೆದಿದೆ. ವ್ಯವಸ್ಥಾಪಕ ಎಚ್.ವೈ.ರುದ್ರಾಕ್ಷಿ ಜತೆಗೆ ಚಾಲಕ ಫಕ್ಕೀರಪ್ಪ ಪೂಜಾರ, ಜ್ಯೂಸ್ ಸೆಂಟರ್ ಮಾಲೀಕ ಪ್ರತೀಕ್ ಬೇವಿನಕಟ್ಟಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
‘ಆರೋಪಿಗಳಿಂದ ಲಂಚದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ’ ಎಂದು ಡಿಎಸ್ಪಿ ವಾಸುದೇವ್ ರಾಮ್ ಎನ್. ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ಗಳಾದ ವೈ.ಎಸ್.ಧರಣಾ ನಾಯಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿ ಎಂ.ಎಂ.ಅಯ್ಯನಗೌಡರ, ಆರ್.ಎಚ್.ಹೆಬಸೂರ, ಎನ್.ಎಸ್.ತಾಯಣ್ಣವರ, ಈರಣ್ಣ ಸಿ.ಜಾಲಿಹಾಳ, ವೀರೇಶ ಜೋಳದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.