ಡಂಬಳ: ಡಾ.ಬಿ.ಆರ್ ಅಂಬೇಡ್ಕರ್ ಜೀವನದ ಸಾಧನೆಗಳು ಅವರು ಅನುಭವಿಸಿದ ಕಷ್ಟಗಳನ್ನು ಕೇವಲ ವಿದ್ಯಾವಂತರು ಪಠ್ಯಪುಸ್ತಕದಲ್ಲಿ ಮಾತ್ರ ಓದುತ್ತಿದ್ದರು. ಆದರೆ ಜೀ ಕನ್ನಡ ವಾಹಿನಿ ಅಂಬೇಡ್ಕರ್ ಅವರ ಜೀವನ ಆಧಾರಿತ ಮಹಾನಾಯಕ ಧಾರವಾಹಿ ಪ್ರಸಾರ ಮಾಡುತ್ತಿರುವುದರಿಂದ ಅನಕ್ಷರಸ್ಥರು ಸೇರಿದಂತೆ ಎಲ್ಲ ವರ್ಗದವರು ಅವರ ಬದುಕಿನ ವಿಚಾರ ಧಾರೆಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ ಎಂದು ಯುವ ಮುಖಂಡ ಪರಶುರಾಮ ಉಡಚಪ್ಪ ಹರಿಜನ ಅಭಿಪ್ರಾಯಪಟ್ಟರು.
ಡಂಬಳ ಹೋಬಳಿ ಕದಾಂಪೂರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಕಾಲೊನಿಯ ನಿವಾಸಿಗಳು ಮಹಾನಾಯಕ ಬ್ಯಾನರ್ ಹಾಕುವ ಮೂಲಕ ವಾಹಿನಿಯನ್ನು ಅಭಿನಂದಿಸಿದರು. ಮಹಾನಾಯಕ ಧಾರವಾಹಿ ಪ್ರತಿಯೊಂದು ಮನೆ ಮಾತಾಗಿದೆ. ಅಂಬೇಡ್ಕರ್ ಅವರ ಉದಾತ್ತ ವಿಚಾರಧಾರೆಗಳು, ತತ್ವ ಆದರ್ಶಗಳು,ಅವರ ಜೀವನದ ಮೌಲ್ಯಗಳನ್ನು ಧಾರವಾಹಿ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದರು.
ದೌರ್ಜನ್ಯ, ಶೋಷಿತ ಸಮುದಾಯ ಶಿಕ್ಷಣ ಕಲಿಯಲು ಅನುಭವಿಸಿದ ಕಷ್ಟಗಳು, ಜಾತಿಯ ವ್ಯವಸ್ಥೆಯನ್ನು ಧಾರವಾಹಿ ಮೂಲಕ ತಿಳಿದುಕೊಳ್ಳಲು ಸಾಧ್ಯಾವಾಗಿದೆ. ಪ್ರತಿಯೊಬ್ಬರು ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.