ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಕೃಷ್ಣಮೃಗ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ರಾಮಚಂದ್ರಪ್ಪ ಹನಮಪ್ಪ ಹಾಗೂ ಮಲ್ಲಿಕಾರ್ಜುನ ಕಾಯಪ್ಪ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಸುರೇಶ ರಾಮಪ್ಪ ದೊಡ್ಡಮನಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಾಲ್ಲೂಕಿನ ಕಣಗಿನಹಾಳ ಗ್ರಾಮದ ಹೊರವಲಯದಲ್ಲಿ ಒಂದು ಹೆಣ್ಣು ಹಾಗೂ ಗಂಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಆರೋಪಿಗಳು ಮಾಂಸ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗದಗ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ನೇತೃತ್ವದ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳ ಜತೆಗೂಡಿ ಕಾರ್ಯಾಚರಣೆ ನಡೆಸಿದ್ದಾರೆ.
ಆರ್ಎಫ್ಒ ರಾಜು ಗೊಂದಕರ, ಡಿವೈಆರ್ಎಫ್ಒಗಳಾದ ಆರ್.ವೈ.ಕಂಬಳಿ, ಎಂ.ಎಸ್.ಸಾಗಮ್ಮನವರ, ಬಿಂಕದಕಟ್ಟಿಯ ಅರಣ್ಯ ರಕ್ಷಕರಾದ ಬಸವರಾಜ ಅಂಗಡಿ, ಅಮಿನಸಾಬ್ ಬಳೂಟಗಿ, ಗ್ರಾಮೀಣ ಠಾಣೆಯ ಮುಖ್ಯ ಪೇದೆ ಚವಡ, ಬೂದಿಹಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಂಟಿ ಕಾರ್ಯಾಚರಣೆ ನಡೆಸಿದ ತಂಡವನ್ನು ಡಿಸಿಎಫ್ ಎ.ವಿ.ಸೂರ್ಯಸೇನ್ ಅಭಿನಂದಿಸಿದ್ದಾರೆ.