ಗದಗ: ‘ಸಂಸ್ಥೆಯ ಹೊರಗುತ್ತಿಗೆ ನೌಕರ, ಆಟೊ ಚಾಲಕ ವೀರಣ್ಣ ಯಾವಗಲ್ಲ ಅವರ ಪ್ರಾಮಾಣಿಕತೆ ಎಲ್ಲ ಚಾಲಕರಿಗೂ ಮಾದರಿ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಎಸ್.ಎಫ್.ಸಿದ್ನೆಕೊಪ್ಪ ಹೇಳಿದರು.
ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವೀರಣ್ಣ ಯಾವಗಲ್ಲ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ವೀರಣ್ಣ ಯಾವಗಲ್ಲ ಕಾಲೇಜು ಅವಧಿಯ ನಂತರ ಆಟೊ ಚಾಲಕರಾಗಿ ಸ್ವಉದ್ಯೋಗ ಮಾಡುತ್ತಿದ್ದಾರೆ. ದಾವಣಗೆರೆಯ ವೀಣಾ ಎಂಬುವರು ಬಂಧುವಿನ ಗೃಹಪ್ರವೇಶ ಮುಗಿಸಿ ಊರಿಗೆ ತೆರಳಲು ವೀರಣ್ಣ ಯಾವಗಲ್ಲ ನಡೆಸುತ್ತಿದ್ದ ಆಟೊದಲ್ಲಿ ನರಸಾಪುರದಿಂದ ಗಂಜಿ ಬಸವೇಶ್ವರ ಸರ್ಕಲ್ವರೆಗೆ ಪ್ರಯಾಣಿಸಿದ್ದರು. ಅವರು ಇಳಿಯುವ ವೇಳೆ ಎಂಟು ತೊಲೆ ಬಂಗಾರ ಇದ್ದ ಬ್ಯಾಗ್ ಅನ್ನು ಆಟೊದಲ್ಲೇ ಮರೆತು ಹೋಗಿದ್ದರು. ಆಟೊದೊಳಗೆ ಸಿಕ್ಕ ಬ್ಯಾಗ್ ಅನ್ನು ವಾರಸುದಾರರಿಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಕರ್ತವ್ಯನಿಷ್ಠೆ ಮೆಚ್ಚಿ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆದ ವೀರಣ್ಣ ಯಾವಗಲ್ಲ ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಸಮುದಾಯ ಅಭಿನಂದಿಸಿದೆ.