ಮುಳಗುಂದ (ಗದಗ ಜಿಲ್ಲೆ): ಇಲ್ಲಿನ ಕೋಟಿ ಓಣಿಯ ನಿವಾಸಿ, ಗದಗ ಎಪಿಎಂಸಿ ಹಾಲಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡ ಚಂದ್ರಶೇಖರಪ್ಪ ಬ.ಬಡ್ನಿ (78) ಸೋಮವಾರ ನಿಧನರಾದರು.
ಮೇ 19ರಂದು ಅವರಿಗೆ ಕೋವಿಡ್ ದೃಢಪಟ್ಟಿತ್ತು. ಚೇತರಿಕೆ ನಂತರ ಕಪ್ಪುಶಿಲೀಂಧ್ರ ರೋಗ ಬಾಧಿಸಿ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಸ್ಥಳೀಯ ಪಟ್ಟಣ ಪಂಚಾಯ್ತಿಗೆ 7 ಬಾರಿ ಆಯ್ಕೆಯಾಗಿದ್ದರು. ಮುಳಗುಂದ ಅರ್ಬನ್ ಕೊ–ಅಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ಸ್ಥಾನ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಸಹಕಾರಿ ಕ್ಷೇತ್ರದ ಉನ್ನತಿಗೆ ಶ್ರಮಿಸಿದ ಹಿನ್ನಲೆಯಲ್ಲಿ ಸಹಕಾರಿ ಪ್ರಶಸ್ತಿಗೆ ಭಾಜನರಾಗಿದ್ದರು.
ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಮುಳಗುಂದದಲ್ಲಿ ಮಂಗಳವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ.