ಗದಗ: ಅವಳಿ ನಗರದ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಗುರುವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಕೋವಿಡ್ ಮಾರ್ಗಸೂಚಿಗಳ ಅನುಸಾರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಇಸ್ಲಾಂ ಧರ್ಮದ ಪ್ರವಾದಿ ಇಬ್ರಾಹಿಂ ಅಲೈ ಹಿಸ್ಸಲಾಂ ಅವರ ನಿಷ್ಠೆ, ಭಕ್ತಿ, ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿದರು.
‘ಸಹೋದರತೆ ಮತ್ತು ಏಕತೆಯ ಸಂದೇಶ ಪಾಲಿಸುವ ಮೂಲಕ ಎಲ್ಲರೂ ಅಲ್ಹಾಹುವಿನ ಪ್ರೀತಿಗೆ ಪಾತ್ರರಾಗಬೇಕು’ ಎಂದು ಧರ್ಮ ಗುರುಗಳು ಸಂದೇಶ ನೀಡಿದರು.
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಕೊರೊನಾ ಆದಷ್ಟು ಬೇಗ ದೂರಾಗಲಿ ಎಂದು ವಿಶೇಷ ಪ್ರಾರ್ಥನೆ ಮಾಡಿದರು. ಕೋವಿಡ್–19 ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಿದರು. ಕೋವಿಡ್ ಕಾರಣದಿಂದಾಗಿ ಆಲಿಂಗನ ರದ್ದುಪಡಿಸಿ, ಕೈಮುಗಿದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಭಾಗವಾಗಿ ಶಕ್ತಾನುಸಾರ ಕುರ್ಬಾನಿ ನೀಡಿ, ನೆರೆಹೊರೆಯವರಿಗೆ ಕುರ್ಬಾನಿ ಪಾಲು ಹಂಚಿದರು. ಬಡವರಿಗೆ ಹಣ, ಆಹಾರ ಪದಾರ್ಥಗಳನ್ನು ದಾನ ಮಾಡಿದರು.