ಮುಂಡರಗಿ (ಗದಗ): ಬಗರ್ ಹುಕುಂ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಂದಕ ತೆಗೆಯಲು ಮುಂದಾದಾಗ ಸಾಗುವಳಿದಾರರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆದು, ಇಬ್ಬರು ರೈತ ಮಹಿಳೆಯರು ಅಧಿಕಾರಿಗಳ ಎದುರೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ನಿರ್ಮಲಾ ಪಾಟೀಲ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕೆಲೂರ ಗ್ರಾಮದಲ್ಲಿ ಸೋಮವಾರ ಘಟನೆ ನಡೆದಿದ್ದು ನಿರ್ಮಲಾ ಪಾಟೀಲ ಹಾಗೂ ಸರೋಜಮ್ಮ ಪಾಟೀಲ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ನಿರ್ಮಲಾ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
‘ರೈತರು ಸಾಗುವಳಿ ಮಾಡುತ್ತಿರುವ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲಿ ಸಾಗುವಳಿ ಮಾಡಲು ಅವಕಾಶವಿಲ್ಲ. ಈ ಕಾರಣದಿಂದ ಅಲ್ಲಿ ಕಂದಕ ತೆಗೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಆರ್ಎಫ್ಒ ಪ್ರದೀಪ ಪವಾರ ತಿಳಿಸಿದ್ದಾರೆ.