ಮುಂಗಾರಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ಗದಗ ಮತ್ತು ರೋಣ ತಾಲ್ಲೂಕಿನಲ್ಲಿ. ಇಲ್ಲಿ ಸಾವಿರಾರು ಹಕ್ಟೇರ್ ಪ್ರದೇಶದಲ್ಲಿ ಮುಂಗಾರಿನ ಹೆಸರು, ಮೆಕ್ಕೆಜೋಳ, ತೊಗರಿ, ಶೇಂಗಾ ಬೆಳೆಗಳು ಒಣಗಿ ಹೋಗಿವೆ. ಕೃಷಿ ಇಲಾಖೆ ಅಂದಾಜಿನಂತೆ 1173 ಹೆಕ್ಟೇರ್ ಪ್ರದೇಶದ ಜೋಳ, 24,653 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ, 28,848 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ, 8,399 ಹೆಕ್ಟೇರ್ ಪ್ರದೇಶದ ಹತ್ತಿ ಬೆಳೆಗಳು ತೇವಾಂಶ ಕೊರತೆಯಿಂದ ಹಾನಿಗೀಡಾಗಿವೆ. ಒಟ್ಟು 1.63 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗೆ ಮಳೆ ಕೊರತೆ ಎದುರಾಗಿದೆ. ಇದರಲ್ಲಿ 1.51 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಭಾಗಶಃ ಒಣಗಿ ಹೋಗಿದೆ.