ಲಕ್ಷ್ಮೇಶ್ವರ (ಗದಗ): ‘ಯಾರು ಏನು ಬೇಕಾದರೂ ತಿನ್ನಬಹುದು. ಆ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಭಂಡತನವನ್ನು ಯಾರೂ ಒಪ್ಪಲಾರರು’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ನಮ್ಮದು ಸಂಸ್ಕೃತಿ, ಪರಂಪರೆ ಇರುವ ನಾಡು. ಇಲ್ಲಿ ಧಾರ್ಮಿಕ ಶ್ರದ್ಧೆ ಬಹಳ ಮುಖ್ಯ. ನಾವು ದೈವವನ್ನು ನಂಬಿ ಜೀವನ ನಡೆಸುವವರು. ರಾಜಕಾರಣದಲ್ಲಿ ಇರುವವರು ಬಹಿರಂಗ ಹೇಳಿಕೆ ಕೊಡುವಾಗ ಎಚ್ಚರಿಕೆ ವಹಿಸಬೇಕು’ ಎಂದರು.
ಆಗಸ್ಟ್ 18ರಂದು ಗುರುವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರು ಮಾಂಸದೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.