ಗದಗ:‘ಬಿಜೆಪಿ ಸರ್ಕಾರ ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ಈ ಕಾರಣದಿಂದ ಅನೇಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ನ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ’ ಎಂದುಸಚಿವ ಶ್ರೀರಾಮುಲು ಹೇಳಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಹಳ ದಿನಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರಣ ಇದೇ 20ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ. ದಿನಕ್ಕೊಂದು ಊರಿಗೆ ಅಡ್ಡಾಡುವ ಪರದೇಶಿ ಗಿರಾಕಿ ಮಾತುಗಳಿಗೆ ಉತ್ತರ ಕೊಡುವ ಅಗತ್ಯ ಇಲ್ಲ’ ಎಂದು ಶ್ರೀರಾಮುಲು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನಾನು ಮೊಳಕಾಲ್ಮೂರು ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂದು ಹೇಳಿಲ್ಲ. ಆದರೆ, ಅದಕ್ಕೂ ಮುನ್ನ ಸಿದ್ದರಾಮಯ್ಯ ತನ್ನ ಕ್ಷೇತ್ರ ಯಾವುದು ಎಂದು ಸ್ಪಷ್ಟಪಡಿಸಬೇಕು’ ಎಂದು ಹರಿಹಾಯ್ದರು.
‘ಮಾತನಾಡುವವರನ್ನು ಬೈದು ಸುಮ್ಮನಾಗಿಸುವುದು ಸಿದ್ದು ಮನಃಸ್ಥಿತಿ. ಸಿಎಂ ಆಗಿದ್ದ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತು ಸೋತರು. ತಮ್ಮದೇ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆದ್ದರು? ಬಾದಾಮಿಯಲ್ಲಿ ನಿಂತು ಗೆದ್ದ ಸಿದ್ದರಾಮಯ್ಯ ಈಗ ಅಲ್ಲಿಗೆ ಹೋದರೆ ಜನ ಮಂಗಳಾರತಿ ಮಾಡಿ ಕಳಿಸುತ್ತಾರೆ. ಕಾಂಗ್ರೆಸ್ಗೆ ಬಂದು ಬಿ.ಬಿ.ಚಿಮ್ಮನಕಟ್ಟಿ, ಎಸ್.ಆರ್.ಪಾಟೀಲ, ಜಿ.ಪರಮೇಶ್ವರ ಅವರನ್ನು ಮುಗಿಸಿದರು. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸಲು ಹೊರಟಿದ್ದಾರೆ’ ಎಂದು ಆರೋಪ ಮಾಡಿದರು.
‘ಶ್ರೀರಾಮುಲು ಆರ್ಎಸ್ಎಸ್ ಗಿರಾಕಿಯಾ?’ ಎಂದು ಕೇಳಿದ್ದ ಸಿದ್ದರಾಮಯ್ಯ ಅವರಿಗೆ ‘ನಿನೇನು ಕಾಂಗ್ರೆಸ್ ಗಿರಾಕಿಯಾ?’ ಎಂದು ಮರು ಪ್ರಶ್ನಿಸಿದರು.
‘ಕಾಂಗ್ರೆಸ್ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಜೆಡಿಎಸ್ನಲ್ಲಿದ್ದಾಗ ಕಾಂಗ್ರೆಸ್ ಬಗ್ಗೆ ಎಂತೆಂತಹ ಶಬ್ದಗಳನ್ನು ಬಳಸಿದ್ದರು ಎಂಬುದನ್ನು ಯೋಚಿಸಬೇಕು. ಬಳಿಕ ಕಾಂಗ್ರೆಸ್ ಪಕ್ಷ ಸೇರಿಕೊಂಡು ಎಲ್ಲರನ್ನೂ ಬ್ಲ್ಯಾಕ್ಮೇಲ್ ಮಾಡುತ್ತಾ ಸಿಎಂ ಆದರು. ಬಳಿಕ ಕಾಂಗ್ರೆಸ್ನ ಘಟಾನುಘಟಿ ನಾಯಕರನ್ನೇ ಮುಗಿಸುವ ಕೆಲಸ ಮಾಡಿದರು. ಸಿದ್ದರಾಮಯ್ಯ ಅವರ ವರ್ತನೆ ನೋಡಿ ಈಗ ಕಾಂಗ್ರೆಸ್ ನಾಯಕರೇ ಪಕ್ಷ ಬಿಟ್ಟು ಹೋಗುವಂತೆ ಹೇಳುತ್ತಿದ್ದಾರೆ’ ಎಂದು ಹೇಳಿದರು.
‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬೆನ್ನಿಗೆ ಚೂರಿಗೆ ಹಾಕಿದವರು ಸಿದ್ದರಾಮಯ್ಯ. ಅವರಿಗೆ ಉತ್ತಮ ಇತಿಹಾಸವಿಲ್ಲ. ಸಿದ್ದರಾಮಯ್ಯ ಸಂಡೇ, ಮಂಡೇ ವಕೀಲಿ ಮಾಡಿಕೊಂಡಿದ್ದವರು. ಕೋರ್ಟ್ಗೆ ಹೋದವರಲ್ಲ. ರಾಜಿ ಸಂಧಾನ ಮಾಡುವ ವಕೀಲ. ನಾನು ಅವನ ಪ್ರಶ್ನೆಗೆ ಉತ್ತರ ಕೊಡಲ್ಲ’ ಅಂತಾ ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.