ಗದಗ: ಕೋವಿಡ್ ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೀವದ ಹಂಗು ತೊರೆದು ಜನರ ಜೀವರಕ್ಷಣೆಗೆ ಹೋರಾಡಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಿ.ಕೆ.ಗುರುಮಠ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ ಕೊರೊನಾ ಸೇನಾನಿಗಳ ಮನೋರಂಜನಾ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ‘ಕಿಲಾಡಿ ಕೃಷ್ಣ’ ನಾಟಕ ಉದ್ಘಾಟಿಸಿ ಮಾತನಾಡಿದರು.
ಜನರ ಆರೋಗ್ಯ ರಕ್ಷಣೆಗಾಗಿ ಒತ್ತಡದಲ್ಲಿ ಕೆಲಸ ಮಾಡುವ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗೆ ನಾಟಕದ ಮೂಲಕ ರಂಜಿಸಿ, ಅವರ ಮನಸ್ಸನ್ನು ಹಗುರಗೊಳಿಸುವ ಹಾಗೂ ಒತ್ತಡದಿಂದ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ ಬಸರಿಗಿಡದ ಮಾತನಾಡಿ, ಎರಡು ವರ್ಷದಿಂದ ಆರೋಗ್ಯ ಸೇನಾನಿಗಳು ಹೋರಾಡಿ ಬೇಸತ್ತಿದ್ದರು. ಅವರಿಗೆ ಸಾಂಸ್ಕೃತಿಕವಾಗಿ ನಾಟಕದ ಮುಖಾಂತರ ಖುಷಿ ನೀಡುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು.
ನಾಟಕ ಅಕಾಡೆಮಿ ಸಂಚಾಲಕಿ ಪ್ರೇಮಾ ಬದಾಮಿ, ರವಿ ದಂಡಿನ, ಶರಣಬಸವ ಶಾಸ್ತ್ರಿ, ಮುತ್ತಣ್ಣ ಲಿಂಗನಗೌಡ್ರ, ಡಿ.ವಿ. ಹುಲ್ಲೂರ, ಸುರೇಶ ಗದಗ, ವಿ.ಬಿ.ತಿರ್ಲಾಪೂರ, ವಿ.ಎಂ.ಕನಕೇರಿ, ಎಂ.ಎನ್.ಕಾಮನಹಳ್ಳಿ, ಎಂ.ಬಿ.ಚನ್ನಪ್ಪಗೌಡ್ರ, ಎಂ.ಕೆ.ತುಪ್ಪದ ಇದ್ದರು.